ADVERTISEMENT

ಬಿಜೆಪಿ ಬಳಿ ಹೇಳಿಕೊಳ್ಳಲು ಸಾಧನೆಗಳಿಲ್ಲ: ಶಾಸಕ ಶ್ರೀನಿವಾಸ ಮಾನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 16:15 IST
Last Updated 29 ಏಪ್ರಿಲ್ 2024, 16:15 IST
ತಿಳವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು
ತಿಳವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು   

ತಿಳವಳ್ಳಿ: ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎನ್ನುತ್ತಾ ಸರ್ವನಾಶ ಮಾಡಿಟ್ಟಿದ್ದೀರಿ. ಬೆಲೆ ಇಳಿಸಲಿಲ್ಲ, ರೈತರ ಮುಖದಲ್ಲಿ ನಗು ತರಿಸಲಿಲ್ಲ, ಯುವಕರಿಗೆ ನೌಕರಿ ಕೊಡಲಿಲ್ಲ, ಕಪ್ಪು ಹಣ ತರಲಿಲ್ಲ. 10 ವರ್ಷಗಳ ಕಾಲ ನೀವು ಸುಳ್ಳು ಹೇಳಿ ಜನರನ್ನು ಯಾಮಾರಿಸಿದ್ದು ಸಾಕು ಅಧಿಕಾರದಿಂದ ತೊಲಗಿ ಎಂದು ಶಾಸಕ ಶ್ರೀನಿವಾಸ ಮಾನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿಯ ಸರ್ಕಾರಿ ಬಸ್ ನಿಲ್ದಾಣದ ಪಕ್ಕದ ಜಾಗದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಧರ್ಮ, ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟಿಸಿ, ಮನಸ್ಸುಗಳನ್ನು ಒಡೆದು ರಾಜಕೀಯ ಬೇಳೆ ಬೇಯಿಸಿಕೊಂಡಿದ್ದು, 10 ವರ್ಷಗಳ ಬಿಜೆಪಿ ಸಾಧನೆ. ಬಿಜೆಪಿ ಬಳಿ ಹೇಳಿಕೊಳ್ಳಲು ಸಾಧನೆಗಳಿಲ್ಲ. ಅಭಿವೃದ್ಧಿ ಹಾಗೂ ಜನಪರವಾದ ವಿಚಾರಗಳಿಲ್ಲ. ಹಾಗಾಗಿ ರಾಜಕಾರಣ ಮಾಡಲು ಸಾವಿನ ಮನೆ ಹುಡುಕುತ್ತಿದೆ. 60 ತಿಂಗಳು ಅವಕಾಶ ಕೇಳಿ ವಂಚಿಸಿದ ಬಿಜೆಪಿ ಅದ್ಯಾವ ಮುಖ ಹೊತ್ತು ಮತ ಕೇಳುತ್ತಿದೆ. ಕರ್ನಾಟಕ ಮತ್ತು ಕನ್ನಡಿಗರಿಗೆ ದ್ರೋಹ ಮಾಡಿರುವ ಕೇಂದ್ರದ ಬಿಜೆಪಿ ನಾಯಕರು ಯಾವ ನೈತಿಕತೆಯಿಂದ ರಾಜ್ಯದಲ್ಲಿ ಸುತ್ತಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ನಿರುದ್ಯೋಗ ಹೆಚ್ಚಳದಿಂದ ಯುವಜನರಲ್ಲಿ ತಳಮಳ ಸೃಷ್ಟಿಯಾಗಿದೆ. ಸಾಲಬಾಧೆಯಲ್ಲಿ ರೈತರು ನರಳುತ್ತಿದ್ದಾರೆ. ಬೆಲೆ ಏರಿಕೆ ಬಿಸಿಯಿಂದ ಗೃಹಿಣಿಯರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರದ ದುಬಾರಿ ನೀತಿಗಳಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಫ್ರೋಜಾ ಕನವಳ್ಳಿ, ಫಯಾಜ್ ಲೋಹಾರ, ವಿನಾಯಕ ಪವಾರ, ಆರೀಫ್ ಲೋಹಾರ, ವಾಸಿಂ ಪಠಾಣ, ನಾಗರಾಜ ಬೈರೋಜಿ, ಲಕ್ಷ್ಮೀಬಾಯಿ ಪಾಟೀಲ, ಲಿಂಗರಾಜ ಕುರುಬರ, ಅಶೋಕ ಉಪ್ಪಾರ, ಮಹಾಬಳೇಶ್ವರ ತೋಟಗೇರ, ಶೇಕಪ್ಪ ಬನ್ನಿಹಳ್ಳಿ, ರಾಜೂ ಶೇಷಗಿರಿ, ಬಸವರಾಜ ಚವ್ಹಾಣ, ನಾಗರತ್ನಾ ಚನ್ನಾಪೂರ, ಸಮ್ಮದ ಮೂಡಿ, ಸುಶೀಲಾ ತಳವಾರ, ಮಹ್ಮದ್‌ಫಾರುಕ್ ಮೂಡಿ, ಖಾದರಸಾಬ ಮೂಗೂರ, ಹರೀಶ ಟೇಲರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.