ಅಕ್ಕಿಆಲೂರು: ಭ್ರಷ್ಟರೆಲ್ಲರೂ ಬಿಜೆಪಿ ಸೇರಿ ಬಿಟ್ಟರೆ ಅವರು ಮಾಡಿದ ಪಾಪ, ಕರ್ಮಗಳೆಲ್ಲವೂ ಕರಗಿ ಹೋಗಿ ಗಂಗಾಸ್ನಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ತನಿಖಾ ಸಂಸ್ಥೆಗಳನ್ನೆಲ್ಲ ತನ್ನ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಿ, ಶಕ್ತಿ ಕುಂದಿಸಲೆತ್ನಿಸುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಶಾಸಕ ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದರು.
ಹಾನಗಲ್ ತಾಲ್ಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ನಡೆದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಮರಸ್ಯ, ಪ್ರೀತಿ, ವಿಶ್ವಾಸದ ಪರಿಕಲ್ಪನೆ ಹೊಂದಿರುವ ಸರ್ಕಾರದ ಅಗತ್ಯವಿದೆ. ಸ್ವಾರ್ಥ ಸಾಧನೆಗೆ ಸಮಾಜ ಒಡೆದು ಆಳುವ ಸರ್ಕಾರವನ್ನು ಜನ ತಿರಸ್ಕರಿಸಬೇಕಿದೆ. ಪ್ರತಿ ಕುಟುಂಬಗಳನ್ನೂ ಆರ್ಥಿಕವಾಗಿ ಸಬಲರನ್ನಾಗಿಸಿ ಸಮೃದ್ಧ, ಸಶಕ್ತ, ಸದೃಢ ಭಾರತ ನಿರ್ಮಿಸಬೇಕಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು.
ಮುಂದಿನ 40 ದಿನಗಳ ಕಾಲ ನಡೆಯಲಿರುವ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರೂ ಭಾಗಿಗಳಾಗಬೇಕಿದೆ. ಈ ಹೋರಾಟದಲ್ಲಿ ದೇಶದ ಉತ್ತಮ ಭವಿಷ್ಯಕ್ಕಾಗಿ ಸಂವಿಧಾನ ಗೆಲ್ಲಬೇಕಿದ್ದು, ಬಿಜೆಪಿ ಸೋಲಬೇಕಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಗ್ರಾ.ಪಂ ಅಧ್ಯಕ್ಷೆ ರಾಧಾ ಇಂಗಳಕಿ, ತಾ.ಪಂ ಮಾಜಿ ಸದಸ್ಯೆ ಶಕುಂತಲಾ ತಳವಾರ, ಮುಖಂಡರಾದ ವಿರುಪಾಕ್ಷ ತಳವಾರ, ಕವಿತಾ ಬಾರ್ಕಿ, ಚೈತ್ರಾ ಭೈರಕ್ಕನವರ, ಅಬ್ದುಲ್ಖಾದರ ಮೂಲಿಮನಿ, ಖಾಜಾಸಾಬ ದ್ವಾರಳ್ಳಿ, ಹಸನಸಾಬ ಹೊಂಡದ, ಸನಾವುಲ್ಲಾ ಮುಲ್ಲಾ, ಮಹೇಶ ಗಿರಿಯಣ್ಣನವರ, ಶಶಿಧರ ಭೈರಕ್ಕನವರ, ಮಾಲತೇಶ ವರ್ದಿ, ರುದ್ರಗೌಡ ಹಕ್ಕಲಮನಿ, ಲಲಿತಾ ಪತ್ತಾರ, ಚನ್ನಬಸಪ್ಪ ಹಾವಣಗಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.