ಹಾವೇರಿ: ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಗುಂಡನಹಳ್ಳಿ ಕ್ರಾಸ್ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, ಅವರ ಗುರುತು ಪತ್ತೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ಗ್ರಾಮದ ಪರಶುರಾಮ್ (45), ಭಾಗ್ಯ (40), ನಾಗೇಶ್ (50), ಇವರ ಪತ್ನಿ ವಿಶಾಲಾಕ್ಷಿ (40), ಸುಭದ್ರಬಾಯಿ (65), ಪುಣ್ಯ (50), ಮಂಜುಳಾ ಬಾಯಿ (62), ಇಬರ ಇಬ್ಬರು ಮಕ್ಕಳು, ಮಾನಸ (24), ರೂಪಾ (40), ಮಂಜುಳಾ (50), ಚಾಲಕ ಆದರ್ಶ್ (23) ಮೃತರು.
'ಮೃತರು ಒಂದೇ ಕುಟುಂಬದವರು ಹಾಗೂ ಸಂಬಂಧಿಕರು. ಕಳೆದ ತಿಂಗಳು ಹೊಸ ಟೆಂಪೊ ಟ್ರಾವೆಲರ್ (ಟಿ.ಟಿ) ಖರೀದಿಸಿದ್ದರು. ಅದರ ಪೂಜೆಯನ್ನು ಸ್ಥಳೀಯವಾಗಿ ಮಾಡಿದ್ದರು. ಹೊಸ ಟಿ.ಟಿ ಆಗಿದ್ದರಿಂದ ದೇವರ ದರುಶನಕ್ಕೆ ಹೋಗಿ ಬರೋಣವೆಂದು ಇತ್ತೀಚಿಗೆ ಎಮ್ಮೆಹಟ್ಟಿ ಗ್ರಾಮದಿಂದ ಹೊರಟಿದ್ದರು.
ಬೆಳಗಾವಿ ಜಿಲ್ಲೆಯ ಚಿಂಚಲಿ ಮಾಯಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿಂದ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಬಂದಿದ್ದರು. ಅಲ್ಲಿ ದರುಶನ ಮುಗಿಸಿಕೊಂಡು ಧಾರವಾಡ-ಹಾವೇರಿ ಮಾರ್ಗವಾಗಿ ತಮ್ಮೂರಿಗೆ ಹೊರಟಿದ್ದರು' ಎಂದು ಪೊಲೀಸರು ತಿಳಿಸಿದರು.
'ಗುಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಪಕ್ಕದಲ್ಲಿ ಚಾಲಕ ಲಾರಿ ನಿಲ್ಲಿಸಿದ್ದ. ಇದೇ ಮಾರ್ಗವಾಗಿ ಶುಕ್ರವಾರ ನಸುಕಿನ 3.45 ಗಂಟೆ ಸುಮಾರಿಗೆ ಅತೀ ವೇಗದಲ್ಲಿ ಹೊರಟಿದ್ದ ಟಿ.ಟಿ, ಲಾರಿಗೆ ಡಿಕ್ಕಿಹೊಡೆದಿತ್ತು. ಇದರಿಂದಾಗಿ 13 ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಟಿ.ಟಿ.ಯಲ್ಲಿ ಸಿಲುಕಿದ್ದ ಅರ್ಪಿತಾ (19), ಅನ್ನಪೂರ್ಣಾ (40), ಮಗುವನ್ನು ರಕ್ಷಿಸಲಾಗಿದೆ. ಇವರಲ್ಲಿ ಇಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ' ಎಂದು ಪೊಲೀಸರು ಹೇಳಿದರು.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.