ಹಾವೇರಿ: ‘ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಆಸಕ್ತಿ ಮೂಡಿಸಬೇಕು ಹಾಗೂ ಚಟುವಟಿಕೆಗಳ ಸಹಿತ ಬೋಧನೆ ಮಾಡಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಹೇಳಿದರು.
ಹಾವೇರಿ ನಗರದ ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆ ನಂ.1ರಲ್ಲಿ ಸೋಮವಾರ ಜಿಲ್ಲೆಯ ಉರ್ದು ಪ್ರೌಢಶಾಲೆಗಳ ಗಣಿತ ಶಿಕ್ಷಕರಿಗೆ, ಟಿ.ಜಿ.ಟಿ ಶಿಕ್ಷಕರಿಗೆ ಮತ್ತು ಹೊಸ ಜಿ.ಪಿ.ಟಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಕೌಟುಂಬಿಕ ಹಿನ್ನೆಲೆ ಅರಿತು, ಪ್ರೀತಿ ಮತ್ತು ವಾತ್ಸಲ್ಯದಿಂದ ತಮ್ಮ ವಿಷಯ ಬೋಧಿಸಬೇಕು. ಹೊಸದಾಗಿ ಆಯ್ಕೆಯಾದ ಶಿಕ್ಷಕರು ಬೋಧನಾ ಪೂರ್ವ ತಯಾರಿ ಮಾಡಿಕೊಂಡು ಚಟುವಟಿಕೆಗಳ ಸಹಿತ ಬೋಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಡಯಟ್ ಪ್ರಾಂಶುಪಾಲ ಗಿರೀಶ ಪದಕಿ ಮಾತನಾಡಿ, ಪ್ರಾರ್ಥಮಿಕ ಶಾಲೆಗಳಲ್ಲಿ ಗಣಿತ ಕಲಿಕೆ ಆಸಕ್ತಿದಾಯಕವಾಗಿಸಲು ತಂತ್ರಜ್ಞಾನದ ಮೂಲಕ ಬೋಧನೆ ಮಾಡಬೇಕು. ಉರ್ದು ಶಾಲೆಗಳ ಸಬಲೀಕರಣಕ್ಕೆ ಅಧಿಕಾರಿಗಳ ಜೊತೆ ಉರ್ದು ಶಿಕ್ಷಕರು ಮತ್ತು ಸಂಘಟನೆಯವರು ಕೈಜೋಡಿಸಬೇಕು ಎಂದು ಹೇಳಿದರು.
ಸಂಪನ್ಮೂಲ ಶಿಕ್ಷಕರಾಗಿ ಭಾಗವಹಿಸಿದ ದಾವಣಗೆರೆ ಜಿಲ್ಲೆಯ ಗಣಿತ ಶಿಕ್ಷಕ ಶೋಯೆಬ್ ಅವರು ವಿದ್ಯಾರ್ಥಿಗಳಿಗೆ ಎನ್.ಎಂ.ಎಂ.ಎಸ್ ಪರೀಕ್ಷೆಯ ಪೂರ್ವ ತಯಾರಿಗೊಳಿಸುವ ಬೋಧನಾ ತಂತ್ರಗಳನ್ನು ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಹೆಚ್ಚು ಅಂಕಗಳಿಸುವ ಮಾರ್ಗೊಪಾಯಗಳನ್ನು ತಿಳಿಸಿದರು.
ಉರ್ದು ಶಿಕ್ಷಣ ಸಂಯೋಜಕ ಸಿಕಂದರ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಿತ ವಿಷಯ ಪರಿವೀಕ್ಷಕ ಬಸನಗೌಡ ಪಾಟೀಲ್, ಡಯಟ್ನ ಹಿರಿಯ ಉಪನ್ಯಾಸಕ ಗುರುಪ್ರಸಾದ, ಉರ್ದು ಶಿಕ್ಷಣ ಸಂಯೋಜಕ ಅಬ್ದುಲ್ ಖಾದರ್ ಕಡೆಮನಿ, ಗಣಿತ ಸಂಘದ ಅಧ್ಯಕ್ಷ ಅಲ್ತಾಫ್ ಪೀರಜಾದೆ, ಜಿಲ್ಲಾ ಉರ್ದು ಸಂಘದ ಅಧ್ಯಕ್ಷ ರಿಯಾಜ ಕುಂದಗೋಳ, ಮುಖ್ಯ ಶಿಕ್ಷಕ ಶಫೀವುಲ್ಲಾ ಹೊನ್ನಾಳಿ, ಜಿಲ್ಲೆಯ ಉರ್ದು ಸಿ ಆರ್ ಪಿ ಗಳಾದ ಅಸದವುಲ್ಲಾ, ನಿಯಾಜ ಮುಂಡರಗಿ, ಮೋಹಿಯೊದ್ದೀನ್ ಮುಂಡರಗಿ, ಲಿಯಾಖತ್ ಅಲಿ, ಇಂತಿಯಾಜ್ ಚೋಡಿಗಾರ ಹಾಗೂ ಜಬಿವುಲ್ಲಾ ಗಂಗನಕೋಟಿ ಇದ್ದರು.
ಸುಹೀಲ್ ಅಹ್ಮದ್ ರಟ್ಟೀಹಳ್ಳಿ ಅವರು ಸ್ವಾಗತಿಸಿದರು. ಇಸ್ಮಾಯಿಲ್ ತಡಕನಹಳ್ಳಿ ನಿರೂಪಿಸಿದರು, ನವೀದ ಇಕ್ಬಾಲ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.