ರಟ್ಟೀಹಳ್ಳಿ: ಹಂದಿಗಳ ಕಾಟಕ್ಕೆ ರೋಷಿಹೋದ ಪಟ್ಟಣದ ನಿವಾಸಿ ವಿರೇಶ ಬೆಣ್ಣಿ ಅವರು ಪಟ್ಟಣ ಪಂಚಾಯ್ತಿ ಎದುರು ಮಂಗಳವಾರ ಅರೆಬೆತ್ತಲೆಯಾಗಿ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರ, ಕಳೆದ ಒಂದು ತಿಂಗಳಿಂದ ಮನೆಯ ಹಿತ್ತಲಿನಲ್ಲಿ ವಿಪರೀತ ಹಂದಿಗಳ ಕಾಟ ಹೆಚ್ಚಾಗಿದೆ. ಪತ್ನಿ, ಮಕ್ಕಳು ಹಂದಿಗಳ ಕಾಟದಿಂದ ಮನೆಯಿಂದ ಹಿತ್ತಲಕ್ಕೆ ಶೌಚಕ್ಕೆ ಬರಲು ಹೆದರುತ್ತಿದ್ದಾರೆ. ಮಕ್ಕಳು ಹಂದಿಗಳಿಗೆ ಹೆದರಿ ಮನೆಯಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಹಂದಿಗಳು ಹಿತ್ತಲಿಲ್ಲಿ ಮರಿಹಾಕಿದ್ದು, ಓಡಿಸಲು ಹೋದರೆ ಕಚ್ಚಲು ಮೈಮೇಲೆ ಬರುತ್ತವೆ. ಮನೆಯ ಹಿತ್ತಲಿನಲ್ಲಿ ಶೇಖರಿಸಿಟ್ಟ ಜೋಳವನ್ನು ಹಾಳು ಮಾಡಿವೆ ಎಂದು ಅಳಲು ತೋಡಿಕೊಂಡರು.
‘ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸಮಸ್ಯೆ ಕುರಿತು ಮಾಹಿತಿ ನೀಡಿದ್ದರೂ ಹಂದಿಗಳನ್ನು ಹಿಡಿಸುವ ಪ್ರಯತ್ನವನ್ನು ಮಾಡಲಿಲ್ಲ. ಹಂದಿಗಳ ಕಾಟದಿಂದ ರೋಷಿಹೋದ ನನ್ನ ಪತ್ನಿ ಹಂದಿಗಳನ್ನು ಹಿಡಿಸಿದ ಮೇಲೆಯೇ ಊರಿಗೆ ಬರುತ್ತೇನೆ ಎಂದು ಮಕ್ಕಳೊಂದಿಗೆ ಹೋಗಿದ್ದಾಳೆ. ಹೀಗಾದರೆ ಮಕ್ಕಳ ಶಿಕ್ಷಣದ ಗತಿಯೇನು ಎನ್ನುವಂತಾಗಿದೆ‘ ಎಂದು ನೀರನ್ನು ಕುಡಿಯದೆ ಬೆಳಿಗ್ಗೆಯಿಂದ ಸುಮಾರು ಮಧ್ಯಾಹ್ನ 2 ಗಂಟೆವರೆಗೆ ಅರೆಬೆತ್ತಲೆಯಾಗಿ ಪ್ರತಿಭಟನೆ ಕೈಗೊಂಡರು.
ಪ್ರತಿಭಟನೆಗೆ ಈರಣ್ಣ ಏಶೆಪ್ಪನವರ ಕೈಜೋಡಿಸಿ ಅವರು ಅರೆಬೆತ್ತಲೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಆನಂತರ ಪ್ರತಿಭಟನಾ ಸ್ಥಳಕ್ಕೆ ಶಾಸಕ ಯು.ಬಿ. ಬಣಕಾರ ಭೇಟಿ ನೀಡಿದರು. ತಕ್ಷಣ ಹಂದಿಗಳನ್ನು ಹಿಡಿಸಿ ಬೇರೆಡೆ ಸಾಗಿಸುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಿಎಸ್ಐ ಜಗದೀಶ ಜೆ. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಹಂದಿಗಳ ಮಾಲೀಕರನ್ನು ಕರೆಸಿ ಸಭೆ ನಡೆಸಿ ತಕ್ಷಣ ಪಟ್ಟಣದಲ್ಲಿ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು. ಇಲ್ಲವಾದಲ್ಲಿ ಪಂಚಾಯ್ತಿಯಿಂದ ಹಂದಿಗಳನ್ನು ಹಿಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಮೇಲೆ ವಿರೇಶ ಬೆಣ್ಣಿ ಪ್ರತಿಭಟನೆಯನ್ನು ಹಿಂಪಡೆದರು.
ನಾಳೆಯಿಂದಲೇ ಹಂದಿಗಳನ್ನು ಹಿಡಿಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪೂರ್ಣ ಬೆತ್ತಲೆಯಾಗಿ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿ, ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸೇರಿದ ಅಧಿಕಾರಿಗಳಿಗೆ ತಿಳಿಸಿ ಪ್ರತಿಭಟನೆ ಕೈಬಿಟ್ಟರು.
ಹಂದಿಗಳ ಹಾವಳಿಗೆ ರೋಷಿ ತವರಿಗೆ ಹೋದ ಪತ್ನಿ ಬಿಸಿಲಿನಲ್ಲೇ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ವ್ಯಕ್ತಿ ಸ್ಥಳಕ್ಕೆ ದೌಡಾಯಿಸಿದ ಕ್ಷೇತ್ರದ ಶಾಸಕ; ಪರಿಹರಿಸುವ ಭರವಸೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.