ADVERTISEMENT

ರಾಣೆಬೆನ್ನೂರು: ಕೆವಿಜಿ ಬ್ಯಾಂಕ್‌ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 4:35 IST
Last Updated 2 ಫೆಬ್ರುವರಿ 2024, 4:35 IST
ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿ ಗ್ರಾಮದ ಕೆವಿಜಿ ಬ್ಯಾಂಕ್‌ ವಿರೋಧಿ ನೀತಿ ವಿರೋಧಿಸಿ ರಾಜ್ಯ ರೈತ ಮಹಿಳಾ ಘಟಕ ಮತ್ತು ದಿನಗೂಲಿ ಹಾಗೂ ಕೃಷಿ ಕಾರ್ಮಿಕ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಿ ಕೆ.ವಿ.ಜಿ ಬ್ಯಾಂಕ್‌ ವ್ಯವಸ್ಥಾಪಕ ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿದರು
ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿ ಗ್ರಾಮದ ಕೆವಿಜಿ ಬ್ಯಾಂಕ್‌ ವಿರೋಧಿ ನೀತಿ ವಿರೋಧಿಸಿ ರಾಜ್ಯ ರೈತ ಮಹಿಳಾ ಘಟಕ ಮತ್ತು ದಿನಗೂಲಿ ಹಾಗೂ ಕೃಷಿ ಕಾರ್ಮಿಕ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಿ ಕೆ.ವಿ.ಜಿ ಬ್ಯಾಂಕ್‌ ವ್ಯವಸ್ಥಾಪಕ ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿದರು    

ರಾಣೆಬೆನ್ನೂರು: ರಾಜ್ಯ ಸರ್ಕಾರ ಬಡವರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಹೆಸರಿನಲ್ಲಿ ಬಂದಂತಹ ಹಣವನ್ನು ಅವರ ಸಾಲದ ಖಾತೆಗೆ ಮುಟ್ಟುಗೋಲು ಹಾಕಿಕೊಂಡು ಖಾತೆ ಲಾಕ್ ಮಾಡಿ ಯೋಜನೆಯ ಲಾಭ ಬಡವರಿಗೆ ಸಿಗದಂತೆ ಮಾಡಿದ ಕೆವಿಜಿ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ರಾಜ್ಯ ರೈತ ಮಹಿಳಾ ಘಟಕ ಮತ್ತು ದಿನಗೂಲಿ ಹಾಗೂ ಕೃಷಿ ಕಾರ್ಮಿಕ ಮಹಿಳಾ ಘಟಕದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ, ನಂತರ ಕೆ.ವಿ.ಜಿ ಬ್ಯಾಂಕ್‌ ವ್ಯವಸ್ಥಾಪಕ ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಬ್ಯಾಂಕಿನವರೆ ವ್ಯವಸ್ಥಿತವಾಗಿ ಎಳ್ಳುನೀರು ಬಿಡುತ್ತಿದ್ದಾರೆ. ಬ್ಯಾಂಕಿನವರ ಬಡವರ ವಿರೋಧಿ ನೀತಿ ಖಂಡಿಸಿದರು. ಎಲ್ಲಾ ಬ್ಯಾಂಕಗಳಲ್ಲೂಯೋಜನೆಯ ಬಗ್ಗೆ ಅಸಹ ಅಸಹಕಾರವಿದೆ. ರಾಣೆಬೆನ್ನೂರಿನ ಎಸ್.ಬಿ.ಐ. ಬ್ಯಾಂಕ್‌ನಲ್ಲಂತೂ ಗ್ಯಾರಂಟಿ ಯೋಜನೆ ಅಷ್ಟೆ ಅಲ್ಲದೆ ಸರ್ಕಾರದ ಪಿಂಚಣಿ ಯೋಜನೆಗಳು ಫಲಾನುಭವಿಗಳಿಂದ ದೂರವಾಗುತ್ತಿವೆ. ಜಿಲ್ಲಾಡಳಿತ ಕೂಡಲೇ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿ ತಹಶೀಲ್ದಾರ್‌ ನೇತೃತ್ವದಲ್ಲಿ ಆಯಾ ತಾಲ್ಲೂಕಿನಲ್ಲಿ ಬ್ಯಾಂಕ್ ಮತ್ತು ರೈತ ಮುಖಂಡರ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಕೆ.ವಿ.ಜಿ ಬ್ಯಾಂಕ್‌ ವ್ಯವಸ್ಥಾಪಕ ಸತ್ಯನಾರಾಯಣ, ಬ್ಯಾಂಕ್‌ ಸಿಬ್ಬಂದಿಯೊಂದಿಗೆ ಚರ್ಚಿಸಿ ಈ ಯೋಜನೆಗಳಲ್ಲಿ ಬಂದ ಹಣವನ್ನೆಲ್ಲಾ ಫಲಾನುಭವಿಗಳಿಗೆ ಇಂದೇ ವರ್ಗಾಯಿಸುತ್ತೇನೆಂದು ಭರವಸೆ ನೀಡಿದ ಮೇಲೆ ಮಹಿಳೆಯರು ಪ್ರತಿಭಟನೆ ಹಿಂಪಡೆದರು.

ADVERTISEMENT

ಮರಿಯಮ್ಮ ಕಜ್ಜರಿ, ಹನುಮವ್ವ ದೇವರಮನಿ, ಶಾಂತವ್ವ ಎಸ್. ತಿಪ್ಪಜ್ಜೇರ, ಗಂಗವ್ವ ನಿಂಗಪ್ಪನವರ, ಜಯ್ಯಮ್ಮ ಬಿ. ಬಾರ್ಕಿ, ನಾಗವ್ವ ಬಿ. ದೇವರಮನಿ, ಬಸಮ್ಮ ಕುರುವತ್ತೇರ, ಚೈತ್ರಾ ಎಂ. ಕುರುವತ್ತೆರ, ಹಾಲವ್ವ ಕಜ್ಜರಿ, ಸಾವಿತ್ರವ್ವ ಎಂ. ಕರೇಗೌಡ್ರ, ಶೈಲವ್ವ ಸಿ. ಕಾಳಿ, ಶೋಭಾ ಕೆ ಉಕ್ಕುಂದ, ಹರಿಹರಗೌಡ ಪಾಟೀಲ, ಜಮಾಲಸಾಬ ಸೇತಸನದಿ ಇದ್ದರು. ಹಲಗೇರಿ ಠಾಣೆ ಪೊಲೀಸರು ಪೊಲೀಸ್ ಬಂದೋಬಸ್ತ್‌ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.