ರಟ್ಟೀಹಳ್ಳಿ: ‘ದೇಶಕ್ಕೆ ಅನ್ನನೀಡುವ ರೈತರನ್ನು ಸರ್ಕಾರ ಕಡೆಗಣಿಸಿದರೆ ಸರ್ಕಾರಕ್ಕೆ ಉಳಿಗಾಲವಿಲ್ಲ. ರೈತರು ಸಂಘಟಿತರಾದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಬಹುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.
ಪಟ್ಟಣದ ಮಹಾಲಕ್ಷ್ಮಿ ಸರ್ಕಲ್ ಹಾಗೂ ಭಗತಸಿಂಗ ಸರ್ಕಲ್ನಲ್ಲಿ ರೈತರೊಂದಿಗೆ ಜೊತೆಗೂಡಿ ರೈತ ಸಂಘದ ನಾಮಫಲಕ ಅನಾವರಣಗೊಳಿಸಿ ಬಳಿಕ ಭಗತಸಿಂಗ್ ಸರ್ಕಲ್ನಲ್ಲಿ ನಡೆದ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
‘ಕೃಷಿಗೆ ಪೂರಕವಾಗಿ ಸಕಾಲಕ್ಕೆ ಬೀಜ, ಗೊಬ್ಬರ, ಜೌಷಧಿ ಪೂರೈಸುವುದರೊಂದಿಗೆ ರೈತ ಸಂಕಷ್ಟಕ್ಕೆ ಸಿಲುಕಿದಾಗ ಸರ್ಕಾರ ಪರಿಹಾರ ನೀಡಬೇಕು. ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ಮಾರುಕಟ್ಟೆ ಒದಗಿಸಬೇಕು, ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿಯನ್ನು ಸರ್ಕಾರ ಕಬಳಿಸುವ ಹುನ್ನಾರ ಕೈಬಿಡಬೇಕು’ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ಕೇಂದ್ರದಲ್ಲಿಯಾಗಲಿ, ರಾಜ್ಯದಲ್ಲಿಯಾಗಲಿ ನಮ್ಮನ್ನಾಳುವ ಸರ್ಕಾರಗಳು ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿರಬೇಕು, ಕೃಷಿಗೆ ಪ್ರಾಧ್ಯಾನ್ಯತೆ ನೀಡಬೇಕು’ ಎಂದು ಹೇಳಿದರು.
ತಾಲ್ಲೂಕು ರೈತ ಸಂಘದ ಗೌರವಾಧ್ಯಕ್ಷ ಬಸನಗೌಡ ಗಂಗಪ್ಪನವರ ಮಾತನಾಡಿ, ಸರ್ಕಾರ ರೈತರಿಗೆ ವಿದ್ಯುತ್, ನೀರು, ಬೆಂಬಲ ಬೆಲೆ, ಸೂಕ್ತ ಮಾರುಕಟ್ಟೆ ಒದಗಿಸದರೆ ರೈತನೇ ಸರ್ಕಾರಕ್ಕೆ ಸಾಲ ನೀಡಬಲ್ಲ’ ಎಂದರು.
ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದ ಮಹಾಂತಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರುದ್ರೇಶ ದ್ಯಾವಕ್ಕಳವರ ಸ್ವಾಗತಿಸಿದರು, ದೀಪಾ ಮಳಗೊಂಡ ಪ್ರಾರ್ಥಿಸಿದರು.
ರೈತ ಮುಖಂಡರಾದ ಪ್ರಭು ಮುದಿವೀರಣ್ಣನವರ, ಬಸನಗೌಡ ಘಂಟೆಪ್ಪಗೌಡ್ರ, ಉಜಿನೆಪ್ಪ ಕೋಡಿಹಳ್ಳಿ, ಮಹ್ಮದಗೌಡ ಪಾಟೀಲ, ಶಂಕ್ರಪ್ಪ ಶಿರಗಂಬಿ, ಶಂಭಣ್ಣ ಮುತ್ತಗಿ, ಪ್ರಭಣುಗೌಡ ಪ್ಯಾಟಿ, ಮಲ್ಲನಗೌಡ ಮಾಳಗಿ,ಎ.ಆರ್. ಮಣಕೂರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.