ADVERTISEMENT

ರಾಣೆಬೆನ್ನೂರು: ₹23 ಲಕ್ಷ ಮೌಲ್ಯದ 25 ಬೈಕ್‌ ವಶ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 15:19 IST
Last Updated 1 ಜುಲೈ 2024, 15:19 IST
ರಾಣೆಬೆನ್ನೂರಿನ ಅಶೋಕ ವೃತ್ತದ ನಗರಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಅಂಶುಕುಮಾರ ಮಾತನಾಡಿದರು
ರಾಣೆಬೆನ್ನೂರಿನ ಅಶೋಕ ವೃತ್ತದ ನಗರಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಅಂಶುಕುಮಾರ ಮಾತನಾಡಿದರು   

ರಾಣೆಬೆನ್ನೂರು: ರಾಜ್ಯದ ವಿವಿಧ ಕಡೆಗಳಲ್ಲಿ ಮೋಟಾರ್ ಬೈಕ್ ಕಳವು ಮಾಡುತ್ತಿದ್ದ ಜಾಲವನ್ನು ಇಲ್ಲಿನ ನಗರ ಪೊಲೀಸ್ ಠಾಣೆಯ ಪೊಲೀಸರು ಪತ್ತೆ ಹಚ್ಚಿ ₹23 ಲಕ್ಷ ಮೌಲ್ಯದ 29 ಮೋಟಾರ್‌ ಬೈಕ್ ಹಾಗೂ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.

ಜೂನ್ 25 ರಂದು ಸಂಗಮ ವೃತ್ತದ ಬಳಿ ಬರೋಡಾ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್ ಕಳವು ಪ್ರಕರಣದ ಹಿಂದೆ ಇರುವ ಜಾಲವನ್ನು ಪತ್ತೆಹಚ್ಚಲು ಜಿಲ್ಲಾ ವರಿಷ್ಠಾಧಿಕಾರಿ ಅಂಶು ಕುಮಾರ್ ನೇತೃತ್ವದಲ್ಲಿ ಇಲ್ಲಿನ ನಗರಠಾಣೆ ಸಿಪಿಐ ಶಂಕರ್ ಎಸ್. ಕೆ, ಪಿಎಸ್‌ಐಗಳಾದ ಗಡ್ಡೆಪ್ಪ ಗುಂಜಟಿಗಿ, ಎಚ್. ಎನ್. ದೊಡ್ಮನಿ ಹಾಗೂ ಪೇದೆಗಳ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತಂಡವು ಸಿಸಿಟಿವಿ ಕ್ಯಾಮೆರಾ, ತಾಂತ್ರಿಕತೆ, ಇತರ ಮಾಹಿತಿಗಳನ್ನು ಕಲೆಹಾಕಿ ಮೂವರು ಆರೋಪಿಗಳನ್ನು ಬಂಧಿಸಿದೆ.

ನಗರದ ಎನ್ .ವಿ.ಹೋಟೆಲ್ ಬಳಿ ನಂಬರ್ ಪ್ಲೇಟ್ ಇಲ್ಲದ ಎರಡು ಬೈಕ್‌ಗಳ ಬಗ್ಗೆ ಸಂಶಯಗೊಂಡು ಪೊಲೀಸರು ಪರಿಶೀಲನೆ ನಡೆಸಿದಾಗ ಈ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಹಿರೇಕೆರೂರನ ಎಲೆಕ್ಟ್ರಿಷಿಯನ್‌ ಮೆಹಮೂದ ಹಜರತ್ತಲಿ ಮುಗಳಗೇರಿ (28) ಹುಬ್ಬಳ್ಳಿಯ ಎಸ್‌.ಎಂ.ಕೃಷ್ಣ ನಗರದ ನಿವಾಸಿ ತನ್ವೀರ ಅಬ್ದುಲ್‌ ಮುನಾಪ ಲಕ್ಷ್ಮೇಶ್ವರ (28) ಹಾಗೂ ಹಿರೆಕೆರೂರಿನ ಖಲಂದರ ಸರ್ಪರಾಜ್‌ ಪಠಾಣ (22) ಎಂದು ಗುರುತಿಸಲಾಗಿದೆ.

ADVERTISEMENT

ಹಿರೆಕೆರೂರಿನ ಟಿಪ್ಪುನಗರದ ಹಬಿವುಲ್ಲಾ ಬಾರಾಸಾಬ ಕಚವಿ ಈತನು ಪರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

‘ಮೂವರು ಆರೋಪಿಗಳ ಬಂಧನ’

‘ಬೈಕ್‌ ಕಳ್ಳತನ ಪ್ರಕರಣದಲ್ಲಿ ನಮ್ಮ ಪೋಲಿಸ್‌ ತಂಡ ಕಾರ್ಯಾಚರಣೆ ನಡೆಸಿ ಒಟ್ಟು ₹23 ಲಕ್ಷ ಮೌಲ್ಯದ ವಿವಿಧ ಮಾಡೆಲ್‌ನ 29 ಬೈಕ್‌ಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ’ ಎಂದು ಜಿಲ್ಲಾ ವರಿಷ್ಠಾಧಿಕಾರಿ ಅಂಶುಕುಮಾರ್ ಹೇಳಿದರು. ಇಲ್ಲಿನ ನಗರ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಆರೋಪಿಗಳು ನಗರದ ಜನ ಸಂದಣಿ ಪ್ರದೇಶ ರೈಲ್ವೆ ಸ್ಟೇಶನ್‌ ಬಸ್‌ ನಿಲ್ದಾಣ ಬ್ಯಾಂಕ್‌ ಮುಂದೆ ನಿಲ್ಲಿಸಿದ ಬೈಕ್‌ಗಳನ್ನು ಕಳವು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಈ ಪ್ರಕರಣ ಬೇಧಿಸುವಲ್ಲಿ ರಚಿಸಿದ್ದ ತಂಡವು ತ್ವರಿತಗತಿಯಲ್ಲಿ 29 ಬೈಕ್‌ಗಳು ಹಾಗೂ ಮೂವರು ಆರೋಪಿಗಳನ್ನು ಬಂಧಿಸಿದ್ದು ತಂಡದ ಯಶಸ್ವಿಗೆ ಕಾರಣವಾಗಿದೆ ಎಂದು ಪೊಲೀಸ್‌ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಪಿಗಳು ಹಾವೇರಿ ದಾವಣಗೆರೆ ಶಿವಮೊಗ್ಗ ಚಿಕ್ಕಮಗಳೂರು ಉತ್ತರ ಕನ್ನಡ ಹಾಸನ ಗದಗ ಬೆಳಗಾವಿ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಬೈಕುಗಳನ್ನು ಕಳವು ಮಾಡಿರುವುದಾಗಿ ಮಾಹಿತಿ ನೀಡಿದರು. ಹೆಚ್ಚುವರಿ ಎಸ್‌ಪಿ ಸಿ ಗೋಪಾಲ್ ಡಿವೈಎಸ್‌ಪಿ ಗಿರೀಶ ಬೋಜಣ್ಣನವರ ನಗರ ಠಾಣೆ ಸಿಪಿಐ ಶಂಕರ್ ಎಸ್.ಕೆ ನಗರಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ ಎಚ್ .ಎನ್. ದೊಡ್ಮನಿ ಸಿ.ಬಿ. ಕಡ್ಲೆಪ್ಪನವರ ಪಿ.ಕೆ. ಸನಿದಿ ವೈ.ಬಿ. ಓಲೇಕಾರ್ ಎಚ್.ಎಲ್. ನಡುವಿನಮನಿ ಶ್ರೀಕಾಂತ್ ಕೊರವರ ಮಾರುತಿ ಹಾಲಬಾವಿ ವಿಠ್ಠಲ್ ಡಿ.ಬಿ ರಾಮರೆಡ್ಡಿ ಸತೀಶ್ ಮಾರುಕಟ್ಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.