ರಟ್ಟೀಹಳ್ಳಿ: ತಾಲ್ಲೂಕಿನ ಹಳ್ಳೂರು ಗ್ರಾಮದ ಪ್ರವೀಣ ಜೀನಳ್ಳಿ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದರೂ, ಅವರಿಗೆ ಪೂರ್ಣ ಪ್ರಮಾಣದ ವೇತನ ಈವರೆಗೆ ನೀಡಿಲ್ಲ. ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದು, ಬಾಕಿ ವೇತನಕ್ಕಾಗಿ ಪರದಾಡುತ್ತಿದ್ದಾರೆ.
ಗ್ರಾಮ ಪಂಚಾಯ್ತಿ ಒಂದು ತಿಂಗಳ ಸಂಬಳವಾಗಿ ₹15,000 ನೀಡಿದೆ. ಇನ್ನೂ ಒಂದು ತಿಂಗಳ ವೇತನ ₹15,000 ಬರುವುದು ಬಾಕಿ ಇದೆ. ಎಷ್ಟು ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಅವರದ್ದು.
‘ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾನು, ಕೋವಿಡ್ ಕಾರಣ ಸ್ವಗ್ರಾಮಕ್ಕೆ ಮರಳಿದ್ದೆ. ಆಂಬುಲೆನ್ಸ್ ಚಾಲಕರಾಗಿ, ದೂದಿಹಳ್ಳಿ ಮೊರರ್ಜಿ ಶಾಲೆಯಲ್ಲಿ ತೆರೆದಿದ್ದ ಕ್ವಾರಂಟೈನ್ ಕೇಂದ್ರಕ್ಕೆ ರೋಗಿಗಳನ್ನು ಕರೆದೊಯ್ಯುವುದು, ಅಲ್ಲಿಂದ ಗುಣಮುಖರಾದವರನ್ನು ಗ್ರಾಮಕ್ಕೆ ತಲುಪಿಸುವುದು, ತುರ್ತು ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದ್ದೆ’ ಎಂದು ಪ್ರವೀಣ ತಿಳಿಸಿದರು.
‘ಅಪಘಾತದಲ್ಲಿ ಕಾಲಿಗೆ ಬಲವಾದ ಪೆಟ್ಟುಬಿದ್ದಿದ್ದು, ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ವೈದ್ಯರು ಹೇಳಿದ್ದಾರೆ. ತಂದೆ-ತಾಯಿ, ಪತ್ನಿ, ಮೂವರು ಮಕ್ಕಳನ್ನು ನೋಡಿಕೊಳ್ಳಬೇಕಿದೆ. ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗೆ ಅಲೆದರೂ ಪ್ರಯೋಜನವಾಗುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.