ADVERTISEMENT

ರಾಣೆಬೆನ್ನೂರು: ಸೇತುವೆ ನಿರ್ಮಿಸಲು ನಿವಾಸಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 5:12 IST
Last Updated 28 ಅಕ್ಟೋಬರ್ 2024, 5:12 IST
ರಾಣೆಬೆನ್ನೂರಿನಿಂದ ಅಡವಿ ಆಂಜನೇಯ ಬಡಾವಣೆಗೆ ತೆರಳುವ ರಸ್ತೆಯಲ್ಲಿ ದೊಡ್ಡಕೆರೆ ಕೋಡಿ ಬಿದ್ದು ಸಾರ್ವಜನಿಕರು ಅಡ್ಡಾಡಲು ಅನಾನುಕೂಲವಾಗಿದೆ 
ರಾಣೆಬೆನ್ನೂರಿನಿಂದ ಅಡವಿ ಆಂಜನೇಯ ಬಡಾವಣೆಗೆ ತೆರಳುವ ರಸ್ತೆಯಲ್ಲಿ ದೊಡ್ಡಕೆರೆ ಕೋಡಿ ಬಿದ್ದು ಸಾರ್ವಜನಿಕರು ಅಡ್ಡಾಡಲು ಅನಾನುಕೂಲವಾಗಿದೆ    

ರಾಣೆಬೆನ್ನೂರು: ಇಲ್ಲಿನ ನಗರಸಭೆ ಅಮೃತ ಸಿಟಿ ಯೋಜನೆಗೆ ಒಳಪಟ್ಟರೂ ಇಲ್ಲಿನ ನಾಲ್ಕನೇ ವಾರ್ಡ್‌ಗೆ ಸಂಬಂಧಿಸಿದ ಅಡವಿ ಆಂಜನೇಯ ಬಡಾವಣೆ ನಿವಾಸಿಗಳು ಮಾತ್ರ ತೊಂದರೆ ಅನುಭವಿಸುವುದು ತಪ್ಪಿಲ್ಲ.

ಅಡವಿ ಆಂಜನೇಯ ಬಡಾವಣೆ ನಗರದಿಂದ 5 ಕಿ.ಮೀ. ಅಂತರದಲ್ಲಿದೆ. ಇಲ್ಲಿ ಬಹುತೇಕರು ಕೂಲಿ ಕಾರ್ಮಿಕರು, ಶಿಳ್ಳಿಕ್ಯಾತರು, ಬುಡಕಟ್ಟು ಜನಾಂಗದವರು, ರಾಮಕುಂಡಾಡಿಗರು, ಅಂಧ ಅಂಗವಿಕಲರು, ಬಡವರು ಸೇರಿದಂತೆ 200ಕ್ಕೂ ಹೆಚ್ಚು ಕುಟುಂಬಗಳಿಂದ 5 ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ.

ಮಳೆಗಾಲ ಬಂದರೆ ಇಲ್ಲಿನ ಬಡಾವಣೆ ನಿವಾಸಿಗಳಲ್ಲಿ ನಡುಕ ಹುಟ್ಟುತ್ತದೆ. ಅಡವಿ ಅಂಜನೇಯ ಬಡಾವಣೆಯಿಂದ ಪಟ್ಟಣಕ್ಕೆ ತೆರಳಲು ಬಸ್‌ ಸೌಲಭ್ಯವಿಲ್ಲ. ದಾರಿಯಲ್ಲಿ ದೊಡ್ಡ ಕೆರೆ ಕೋಡಿ ಬಿದ್ದು ಹರಿಯುವುವಾಗ ದಿನಗಟ್ಟಲೇ ಸಂಪರ್ಕ ಕಡಿದುಕೊಳ್ಳುವ ಭೀತಿ ಉಂಟಾಗುತ್ತದೆ. ಪ್ರತಿ ಸಲ ವಾಹನ ಸಂಚಾರ ಬಂದ್‌ ಆಗಿ ಸಂಚಾರಕ್ಕೆ ಅನಾನುಕೂಲವಾಗುತ್ತದೆ. ಪಟ್ಟಣಕ್ಕೆ ಹೋಗದಿದ್ದರೆ ಅಂದು ಉಪವಾಸವೇ ಗತಿ. ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಮನೆಯಲ್ಲಿ ಕೂಡುವಂತಾಗುತ್ತದೆ.

ADVERTISEMENT

‘ಸ್ಟೇಶನರಿ ಸಾಮಾನು, ಟಿಕಳಿ, ತಬಲಾ, ಡಬ್ಬಾ, ಕಸಬರಗಿ, ಸೂಜಿ, ಪಿನ್ನ, ಕೂದಲು, ಚಾಪೆ, ಬಾಂಡೆ ಸಾಮಾನು ಮಾರಿ ಜೀವನ ನಡೆಸುತ್ತೇವೆ. ಮಳೆಗಾಲದ ರಸ್ತೆ ಸಂಪರ್ಕದ ಈ ಸಮಸ್ಯೆ ನಿವಾರಣೆಗೆ ದೊಡ್ಡ ಕೆರೆ ಕೋಡಿ ಬೀಳುವ ರಸ್ತೆಗೆ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಿಸಬೇಕು. ನಗರಕ್ಕೆ ಹೋಗಿ ಬರಲು ಇದೇ ರಸ್ತೆ ಮುಖ್ಯವಾಗಿದೆ. ಕೆರೆ ಕೋಡಿ ಬಿದ್ದು ನೀರು ರಭಸದಿಂದ ಹರಿಯುವಾಗ ಇಲ್ಲಿನ ನಿವಾಸಿಗಳು ಮನೆಯಲ್ಲಿಯೇ ಕಾಲ ಕಳೆಯುವಂತಾಗುತ್ತದೆ. ಇಲ್ಲವಾದರೆ 2- 3 ಕಿಮೀ ಸುತ್ತುವರೆದು ಗಂಗಾಜಲ ತಾಂಡಾ ಸುತ್ತುವರೆದು ಬರಬೇಕು. ಆಟೊಗೆ ನೂರಾರು ರೂಪಾಯಿ ಹಣ ಕೇಳುತ್ತಾರೆ. ಕಳೆದ ಹತ್ತಾರು ವರ್ಷಗಳಿಂದ ಈ ಸಮಸ್ಯೆ ಇದೆ. ಈ ಬಗ್ಗೆ ಅನೇಕ ಬಾರಿ ನಗರಸಭೆ ಹಾಗೂ ಶಾಸಕರರು, ಸಚಿವರಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ’ ಎಂಬುದು ಇಲ್ಲಿನ ನಿವಾಸಿಗಳ ದೂರಾಗಿದೆ.

‘ಕೆರೆ ಕೋಡಿ ಬಿದ್ದು ರಸ್ತೆಗೆ ಬ್ರಿಜ್‌ಕಂ ಬ್ಯಾರೇಜ್‌ ನಿರ್ಮಿಸುವ ಕುರಿತು ಮಾಜಿ ಶಾಸಕ ಜಿ.ಶಿವಣ್ಣ (ತಿಳುವಳ್ಳಿ) ಮುಂದಾಗಿದ್ದರು. ಕೆರೆಯ ಸುತ್ತಮುತ್ತಲಿನ ಜಮೀನುಗಳ ರೈತರು ತಕಾರರು ಮಾಡಿದ್ದಕ್ಕೆ ಸೇತುವೆ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿತು. ಸೇತುವೆ ನಿರ್ಮಾಣ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂಬುದು ಇಲ್ಲಿನ ನಿವಾಸಿಗಳ ದೂರಾಗಿದೆ.

ಮಳೆಗಾಲದಲ್ಲಿ ದಿನಾಲು ಕೆರೆ ಕೋಡಿ ಬಿದ್ದಾಗ ಪಟ್ಟಣಕ್ಕೆ ಕೆಲಸಕ್ಕೆ ಹೋಗಲು ಆಗದು. ಕೂಲಿ ಇಲ್ಲದೇ ಜೀವನ ನಡೆಸಲು ತೊಂದರೆಯಾಗುತ್ತದೆ. ಸರ್ಕಾರ ಕೂಡಲೇ ದೊಡ್ಡ ಕೆರೆಯ ಕೋಡಿ ಬಳಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಿಸಿ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಇಲ್ಲಿನ ನಿವಾಸಿಗಳಾದ ಸಿದ್ದು ಚಿಕ್ಕಬಿದರಿ, ನಂದೀಶ ಕೋರಿಶೆಟ್ಟರ, ಇಬ್ರಾಹಿಂ ಶೇಖ್‌, ಈರಣ್ಣ ಶಿರೂರ, ಗದಿಗೆಪ್ಪ ಮಣ್ಣೂರ, ದಿಳ್ಳೆಪ್ಪ ಕಾಟಿ, ಹನುಮಂತಪ್ಪ ಯಡಿಚಿ, ನಿಜಾಮ ಮಸೂತಿ, ಅಮೀದಮ್ಮ ಶಿಡೇನೂರ, ಸುರೇಶ ಇಂಗೋಲಿ, ಪರಶುರಾಮ ಕಿಳ್ಳಿಕ್ಯಾತರ, ಶ್ರೀಕಾಂತ ವಾಸನ, ಸರಸ್ವತಿ ಕೋರಿಶೆಟ್ಟರ ಸೇರಿದಂತೆ ಆಟೊ ಚಾಲಕರು ಆಗ್ರಹಿಸಿದ್ದಾರೆ.

ದೊಡ್ಡಕೆರೆ ಕೋಡಿ ಬಿದ್ದು ಅಡವಿ ಆಂಜನೇಯ ಬಡಾವಣೆಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಳ್ಳುವಲ್ಲಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು 
ಪ್ರಕಾಶ ಕೋಳಿವಾಡ ಶಾಸಕ 
ರಾಣೆಬೆನ್ನೂರಿನ ದೊಡ್ಡ ಕೆರೆ ಸಣ್ಣ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಸದ್ಯ ನಗರಸಭೆಯವರು ನಿರ್ವಹಣೆ ಮಾಡುತ್ತಾರೆ 
ರವೀಶ ಆರಾಧ್ಯ ಎಇಇ ಸಣ್ಣ ನೀರಾವರಿ ಇಲಾಖೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.