ADVERTISEMENT

ಶಿಗ್ಗಾವಿ: ಕೃಷಿಯಲ್ಲಿ ಯಶಸ್ಸು ಕಂಡ ನಿವೃತ್ತ ಶಿಕ್ಷಕ

ಶಿಗ್ಗಾವಿ: ವರ್ಷದಲ್ಲಿ ಕೃಷಿಯಿಂದ ₹1.5 ಲಕ್ಷ ಆದಾಯ ಪಡೆಯುವ ಅಂದಾನಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 5:23 IST
Last Updated 20 ಸೆಪ್ಟೆಂಬರ್ 2024, 5:23 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ನಿವೃತ್ತ ಮುಖ್ಯಶಿಕ್ಷಕ ಎ.ಕೆ.ಆದವಾನಿಮಠ ಕೃಷಿ ಕಾರ್ಯದಲ್ಲಿ ನಿರತವಾಗಿರುವುದು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ನಿವೃತ್ತ ಮುಖ್ಯಶಿಕ್ಷಕ ಎ.ಕೆ.ಆದವಾನಿಮಠ ಕೃಷಿ ಕಾರ್ಯದಲ್ಲಿ ನಿರತವಾಗಿರುವುದು   

ಶಿಗ್ಗಾವಿ: ಕಾಯಕದಲ್ಲಿ ನಂಬಿಕೆ ಹಾಗೂ ವಿಶ್ವಾಸವಿದ್ದರೆ ಯಶಸ್ಸು ತಾನಾಗಿಯೇ ಒಲಿಯುತ್ತದೆ. ಅಂತಹ ದಾರಿಯಲ್ಲಿ ಸಾಗಿದ ತಾಲ್ಲೂಕಿನ ಬಂಕಾಪುರದ 77 ವರ್ಷ ವಯಸ್ಸಿನ ನಿವೃತ್ತ ಮುಖ್ಯ ಶಿಕ್ಷಕ ಅಂದಾನಸ್ವಾಮಿ ಕೊಟ್ಟಯ್ಯಸ್ವಾಮಿ ಆದವಾನಿಮಠ, ಕೃಷಿ ಕಾಯಕದಲ್ಲಿ ಯಶಸ್ಸು ಕಂಡಿದ್ದಾರೆ.

ತಾಲ್ಲೂಕಿನ ಶಿಶುವಿನಹಾಳ ಶರೀಫ ಶಿವಯೋಗಿಗಳ ಪ್ರೌಢಶಾಲೆಯಲ್ಲಿ 1970ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅವರು, ನಂತರ ಬಂಕಾಪುರದ ಎಂಇಎಸ್ ಪ್ರೌಢಯಲ್ಲಿ ಸೇರಿ ಸುಮಾರು 36 ವರ್ಷ ಸೇವೆ ಸಲ್ಲಿಸಿದರು. ನಿವೃತ್ತ ನಂತರ, ತಮ್ಮ ಒಂದು ಎಕರೆ ಜಮೀನಿನಲ್ಲಿ ತೋಟದ ಬೆಳೆ ಬೆಳೆಯುತ್ತ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ.

ಸುಮಾರು 40 ತೆಂಗಿನ ಮರಗಳು, 25 ಮಾವು ಗಿಡಗಳನ್ನು ಹಚ್ಚಿದ್ದಾರೆ. ಬೇವಿನಮರ ಸೇರಿದಂತೆ ಕೆಲ ಔಷಧಿ ಸಸ್ಯಗಳನ್ನು ಬೆಳೆದಿದ್ದಾರೆ. ಶೇಂಗಾ, ಗೋವಿನಜೋಳ, ಪಪ್ಪಾಯಿ, ಅಲಸಂಧಿ, ಹೆಸರು ಸೇರಿದಂತೆ ಮಿಶ್ರ ಬೆಳೆ ಬೆಳೆಯುತ್ತಾರೆ. ಕೊಳವೆ ಬಾವಿ ಕೊರೆಸಿದ್ದು, 2 ಇಂಚು ನೀರು ಬರುತ್ತಿದೆ. ಹೀಗಾಗಿ ನೀರಾವರಿ ಕೃಷಿ ಕೈಗೊಂಡಿದ್ದಾರೆ.

ADVERTISEMENT

ಗಿಡಗಳಿಗೆ ಹಾಗೂ ಬೆಳೆಗಳಿಗೆ ಸ್ವತಃ ನೀರು ಹಾಯಿಸುವುದು, ಕಸ ತೆಗೆಯುವುದು, ಗೊಬ್ಬರ ಹಾಕುವುದು, ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಹೀಗಾಗಿ, ಕೃಷಿಯಿಂದ ಪ್ರತಿ ವರ್ಷದಲ್ಲಿ ವೆಚ್ಚ ತೆಗೆದು ₹1.5 ಲಕ್ಷ ಆದಾಯ ಪಡೆದು ಪ್ರಗತಿಪರ ರೈತರಾಗಿದ್ದಾರೆ.

ಅಂದಾನಸ್ವಾಮಿ ಅವರಿಗೆ ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯದಿದ್ದಾರೆ. ಒಬ್ಬ ಮಗ, ರಾಯಚೂರ ಜಿಲ್ಲೆ ದೇವದುರ್ಗ ತಾಲ್ಲೂಕಿನ ಸುಗರಾಳಮಠದಲ್ಲಿ ಸ್ವಾಮೀಜಿಗಳಾಗಿದ್ದಾರೆ.

‘ನಾನು ಕೆಲಸ ಮಾಡಲು ಶುರು ಮಾಡಿದಾಗ, ₹238 ವೇತನವಿತ್ತು. ಕೊನೆಯಲ್ಲಿ ನಾನು ಪಡೆದ ವೇತನ ₹22 ಸಾವಿರ. ಈಗ ಸರ್ಕಾರ ಹೆಚ್ಚಿನ ವೇತನ ನೀಡುತ್ತಿದೆ. ಶಿಕ್ಷಕರು ತಮ್ಮ ವೃತ್ತಿ ನಿಷ್ಠತೆ ತೋರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಆದವಾನಿಮಠ ಹೇಳುತ್ತಾರೆ.

ಎ.ಕೆ. ಆದವಾನಿಮಠ
‘ಕೃಷಿ ಕಾಯಕಕ್ಕೆ ಉತ್ತೇಜಿಸಿ’
ಕೃಷಿ ಪ್ರಧಾನ ದೇಶ ನಮ್ಮದು. ಪ್ರಜ್ಞಾವಂತ ನಾಗರೀಕರು ಕೃಷಿ ಕ್ಷೇತ್ರಕ್ಕೆ ಬರಬೇಕು. ವಿವಿಧ ಮಿಶ್ರ ಬೆಳೆ ಬೆಳೆಯುವ ಮೂಲಕ ಆಹಾರದ ಕೊರತೆ ನೀಗಿಸಲು ಮುಂದಾಗಬೇಕು. ಕೃಷಿ ಕಾಯಕಕ್ಕೆ ಉತ್ತೇಜನ ನೀಡಬೇಕು. ಮಕ್ಕಳಿಗೆ ವೈದ್ಯ ಎಂಜಿನಿಯರ್ ಆಗುವಂತೆ ಹೆಚ್ಚು ಒತ್ತಾಯಿಸದೇ ಕೃಷಿ ಚಟುವಟಿಕೆ ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆ ಬಗ್ಗೆ ತಿಳಿಸುವಂತಾಗಬೇಕು ಎನ್ನುತ್ತಾರೆ ಕೃಷಿಕ ಎ.ಕೆ. ಆದವಾನಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.