ADVERTISEMENT

ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ: ಹೈಕಮಾಂಡ್ ತೀರ್ಮಾನ

ಶಿಗ್ಗಾವಿ- ಸವಣೂರು ವಿಧಾನಸಭಾ ‌ಕ್ಷೇತ್ರದ ಉಪಚುನಾವಣೆ: ಸಲೀಂ ಅಹಮದ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:51 IST
Last Updated 19 ಜೂನ್ 2024, 14:51 IST
ಸಲೀಂ ಅಹಮದ್‌ 
ಸಲೀಂ ಅಹಮದ್‌    

ಹಾವೇರಿ: ‘ಶಿಗ್ಗಾವಿ- ಸವಣೂರು ವಿಧಾನಸಭಾ ‌ಕ್ಷೇತ್ರದ ಉಪಚುನಾವಣೆಯ ದಿನಾಂಕ ಸದ್ಯದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಹೆಚ್ಚು ಬೇಡಿಕೆ ಇದೆ. ಅಂತಿಮವಾಗಿ ಅಭ್ಯರ್ಥಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ’ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇವೆ. ಆದರೆ, ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬಂದಿದೆ. ಹೀಗಾಗಿ, ಮುಂಬರುವ ಉಪಚುನಾವಣೆಯಲ್ಲಿ ಗೆಲುವು ನಿಶ್ಚಿತ’ ಎಂದರು.

ನೀವು ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಮಾಡುತ್ತದೆ. ಮುಂದೆ ನೋಡೋಣ’ ಎಂದರು.

ADVERTISEMENT

ದುರಂಹಕಾರಿ ಕೇಂದ್ರ ಸರ್ಕಾರ: ‘ದುರಂಹಕಾರಿ ಸರ್ಕಾರಕ್ಕೆ ಈ ಬಾರಿಯ ಚುನಾವಣೆಯಲ್ಲಿ ಜನರಿಂದ ತಕ್ಕ ಸಂದೇಶ ರವಾನೆಯಾಗಿದೆ. ಜನರ ವಿಶ್ವಾಸ ಇದೆ ಎಂಬುದಾಗಿ ಬೀಗುತ್ತಿದ್ದ ನರೇಂದ್ರ ಮೋದಿ ಸರ್ಕಾರಕ್ಕೆ ಹಿನ್ನಡೆಯೂ ಆಗಿದೆ. ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದವರಿಗೆ ಮತದಾನದ ಮೂಲಕ ಜನರು ಎಚ್ಚರಿಕೆ ನೀಡಿದ್ದಾರೆ. ಈಗ ರಚನೆಯಾಗಿರುವ ಎನ್‌ಡಿಎ ಸರ್ಕಾರ, ಕಿಚಡಿ ಸರ್ಕಾರ. ಹೆಚ್ಚು ದಿನ ಬಾಳುವುದಿಲ್ಲ’ ಎಂದು ಹೇಳಿದರು.

‘ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಪೆಟ್ರೋಲ್ ದರ ₹ 68 ಇತ್ತು. ಅಡುಗೆ ಅನಿಲ ದರ ₹ 400 ಇತ್ತು. ಎನ್‌ಡಿಎ ಸರ್ಕಾರ ಬಂದ ಮೇಲೆ ಪೆಟ್ರೋಲ್ ದರ ₹ 108 ಹಾಗೂ ಅಡುಗೆ ಅನಿಲ ಸಿಲಿಂಡರ್ ದರ ₹ 1,000 ಆಗಿತ್ತು. ಅದನ್ನು ಪ್ರಶ್ನಿಸಿ ಬಿಜೆಪಿಯವರು ಏಕೆ ಪ್ರತಿಭಟನೆ ಮಾಡಲಿಲ್ಲ. ಈಗ ಮೂರು ರೂಪಾಯಿ ಏರಿಸಿದ್ದಕ್ಕೆ ಪ್ರತಿಭಟನೆ ಮಾಡುವ ನೈತಿಕತೆ ಅವರಿಗೆ ಇದೆಯಾ’ ಎಂದು ಸಲೀಂ ಅಹಮದ್ ಪ್ರಶ್ನಿಸಿದರು.

‘ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಮನಗೆದ್ದಿವೆ. ಯೋಜನೆಗಳು ಯಥಾಪ್ರಕಾರ ಮುಂದುವರಿಯಲಿವೆ’ ಎಂದರು.

ಸೋಲಿನ ವಿಶ್ಲೇಷಣೆಗೆ ಸಭೆ: ‘ಲೋಕಸಭಾ ಚುನಾವಣೆಯಲ್ಲಿ ಕೆಲವು ಹಿನ್ನಡೆಗಳು ಆಗಿವೆ. ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಲು ಕೆಪಿಸಿಸಿ ಮುಖಂಡರು ಸಭೆ ನಡೆಸಲಿದ್ದಾರೆ. ಮುಂಬರುವ ಚುನಾವಣೆ ಎದುರಿಸಲು ಪಕ್ಷವನ್ನು ಸಂಘಟನೆ ಮಾಡಲು ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಕಾಂಗ್ರೆಸ್ ಪಕ್ಷದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡರ, ಮುಖಂಡರಾದ ನೆಹರು ಓಲೇಕಾರ್, ಯಾಸೀರ್‌ಖಾನ್ ಪಠಾಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.