ಹಾವೇರಿ: ಶಿಗ್ಗಾವಿ- ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಗೂ ಮುನ್ನವೇ ಟಿಕೆಟ್ಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಶುರುವಾಗಿದೆ. ಶಿಗ್ಗಾವಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆ ಆಯೋಜಿಸಲಾಗಿದ್ದು, ವೀಕ್ಷಕರ ಎದುರೇ ಬಣ ಪ್ರದರ್ಶನ ಮಾಡಲು ಆಕಾಂಕ್ಷಿಗಳು ಸಜ್ಜಾಗಿದ್ದಾರೆ.
ಪಟ್ಟಣದ ಹನುಂತಗೌಡ್ರ ಪಾಟೀಲ ಕಲ್ಯಾಣ ಭವನ ಒಳಗೆ ಪಕ್ಷದ ಪ್ರಮುಖ ವೇದಿಕೆ ಮಾಡಲಾಗಿದೆ. ಕಲ್ಯಾಣ ಭವನ ಮುಂಭಾಗದಲ್ಲಿ ಆಕಾಂಕ್ಷಿ ಅಜ್ಜಂಪೀರ ಖಾದ್ರಿ ಅವರ ಬೆಂಬಲಿಗರು ಪ್ರತ್ಯೇಕ ಪೆಂಡಾಲ್ ಹಾಕಿದ್ದಾರೆ.
ಕಾಂಗ್ರೆಸ್ ಸಚಿವರಾದ ಈಶ್ವರ ಖಂಡ್ರೆ, ವಿನಯ ಕುಲಕರ್ಣಿ, ಸಂತೋಷ್ ಲಾಡ ಹಾಗೂ ಇತರೆ ಮುಖಂಡರು ಸಭೆಗೆ ಬರುತ್ತಿದ್ದಾರೆ. ಇದಕ್ಕೂ ಮುನ್ನವೇ ಟಿಕೆಟ್ ಆಕಾಂಕ್ಷಿಗಳ ಪ್ರತ್ಯೇಕ ಪೆಂಡಾಲ್ ನಿರ್ಮಿಸಿಕೊಂಡು ಬಲ ಪ್ರದರ್ಶನ ಮಾಡುತ್ತಿದ್ದಾರೆ.
'ಪಕ್ಷದ ವೇದಿಕೆಯಲ್ಲಿ ಕುಳಿತರೆ ಖಾದ್ರಿ ಅವರ ಬೆಂಬಲಿಗರು ಎಷ್ಟಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಅದಕ್ಕೆ ಪ್ರತ್ಯೇಕ ಪೆಂಡಾಲ್ ಮಾಡಿದ್ದೇವೆ' ಎಂದು ಬೆಂಬಲಿಗರು ತಿಳಿಸಿದರು.
ಇನ್ನೊಬ್ಬ ಆಕಾಂಕ್ಷಿ ಯಾಸೀರಖಾನ್ ಪಠಾಣ ಬೆಂಬಲಿಗರು ಪ್ರತ್ಯೇಕ ಜಾಗದಲ್ಲಿ ನಿಂತಿದ್ದಾರೆ.
ಪಕ್ಷದ ಮುಖಂಡರ ಆಗಮನಕ್ಕಾಗಿ ರಸ್ತೆಯುದ್ದಕ್ಕೂ ಬ್ಯಾನರ್ಗಳನ್ನು ಪ್ರದರ್ಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.