ADVERTISEMENT

ಜನತಾ ಪ್ರಣಾಳಿಕೆ ಅಭಿಯಾನ: ಅ.15ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 15:54 IST
Last Updated 14 ಅಕ್ಟೋಬರ್ 2024, 15:54 IST
ರವಿ ಕೃಷ್ಣಾರೆಡ್ಡಿ
ರವಿ ಕೃಷ್ಣಾರೆಡ್ಡಿ   

ಶಿಗ್ಗಾವಿ: ‘ಉಪಚುನಾವಣೆ ಅಂಗವಾಗಿ ಮುಂಬರುವ ಶಾಸಕರು ಹೇಗಿರಬೇಕು ಮತ್ತು ಯಾವ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದು ಶಿಗ್ಗಾವಿ, ಸವಣೂರು ಜನರ ಆಶೋತ್ತರಗಳಿಗೆ ಅನುಗುಣವಾಗಿ ಕೆ.ಆರ್.ಎಸ್ ಪಕ್ಷದಿಂದ ಜನತಾ ಪ್ರಣಾಳಿಕೆ ಅಭಿಯಾನಕ್ಕೆ ಅ. 15 ರಂದು ಚಾಲನೆ ನೀಡಲಾಗುತ್ತಿದೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮತಕ್ಷೇತ್ರದಲ್ಲಿ ಪಕ್ಷವು ಈಗಾಗಲೇ ಸಂಚಲನವನ್ನು ಸೃಷ್ಟಿಸಿದ್ದು, ಪಕ್ಷದ ಕಾರ್ಯಕರ್ತರು ಕ್ಷೇತ್ರದ ಮೂಲೆಮೂಲೆಗೆ ತೆರಳಿ ಪ್ರಚಾರ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ’ ಎಂದರು.

‘ಈಗಾಗಲೇ ವಿವಿಧೆಡೆ ನಡೆದ ಜನಸಂವಾದದಲ್ಲಿ ಜನರ ಮತ್ತು ಗ್ರಾಮಗಳ ಸಮಸ್ಯೆಗಳನ್ನು ಆಲಿಸಿ, ಶಿಗ್ಗಾವಿ, ಸವಣೂರು ಮತ್ತು ಬಂಕಾಪುರ ಪಟ್ಟಣಗಳಲ್ಲಿ ಕಂಡು ಬಂದ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು, ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗಿದೆ’ ಎಂದರು.

ADVERTISEMENT

‘ಅಭಿಯಾನವು ವಾರದವರೆಗೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಜನರ ಜೊತೆ ಮಾತನಾಡಿ,  ಕ್ಷೇತ್ರದ ಶಾಸಕರಿಂದ ಏನನ್ನು ಬಯಸುತ್ತಾರೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಯಾವೆಲ್ಲ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಎಂದು ಜನರ ಅಭಿಪ್ರಾಯಗಳನ್ನು ಕೇಳಿ ವಿಡಿಯೊ ಚಿತ್ರೀಕರಿಸಿಕೊಳ್ಳಲಿದ್ದಾರೆ. ಜನರು ತಮ್ಮ ಅಭಿಪ್ರಾಯಗಳನ್ನು ಬರಹ ಅಥವಾ ವಿಡಯೊೋ ಮಾಡಿ ಪಕ್ಷದ ಸಹಾಯವಾಣಿ ಸಂಖ್ಯೆ 8861775862ಗೆ ವಾಟ್ಸ್‌ಆ್ಯಪ್‌ ಮಾಡಬಹುದು’ ಎಂದರು.

ಪಕ್ಷದ ರಾಜ್ಯ ಕಾರ್ಯದರ್ಶಿ ರಘುಪತಿ ಭಟ್, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ ಬಿಂದಲಗಿ, ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.