ಹಾವೇರಿ: ನಗರದಲ್ಲಿ ಬಿಡುವು ಕೊಡುತ್ತಲೇ ಮಳೆ ಸುರಿಯುತ್ತಿದ್ದು, ತಹಶೀಲ್ದಾರ್ ಕಚೇರಿಯ ಹಳೇ ಕಟ್ಟಡದ ಚಾವಣಿ ಅಲ್ಲಲ್ಲಿ ಸೋರಲಾರಂಭಿಸಿದೆ.
ಹಲವು ವರ್ಷಗಳ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ಇದೆ. ಈ ಬಾರಿ ಕಟ್ಟಡದ ಚಾವಣಿ ಸೋರುತ್ತಿದ್ದು, ಕಚೇರಿಯೊಳಗೆ ನೀರು ಬೀಳುತ್ತಿದೆ.
ಕಚೇರಿ ಸೋರುತ್ತಿದ್ದ ವಿಷಯ ತಿಳಿದ ಶಾಸಕ ರುದ್ರಪ್ಪ ಲಮಾಣಿ ಸೋಮವಾರ ದಿಢೀರ್ ಭೇಟಿ ನೀಡಿದರು. ಭೂ ದಾಖಲೆ ಕೊಠಡಿ, ಅಭಿಲೇಖಾಲಯ ಕೊಠಡಿ, ಎಡಿಎಲ್ಆರ್ ಹಾಗೂ ಇತರೆ ವಿಭಾಗಗಳ ಕೊಠಡಿಗಳನ್ನು ಪರಿಶೀಲಿಸಿದರು.
ಕಂದಾಯ ಇಲಾಖೆ ದಾಖಲೆಗಳು ಹಾಳಾಗದಂತೆ ಎಚ್ಚರಿಕೆ ವಹಿಸುವಂತೆಯೂ ಕಚೇರಿ ಸಿಬ್ಬಂದಿಗೆ ತಾಕೀತು ಮಾಡಿದರು.
‘ತಹಶೀಲ್ದಾರ್ ಕಚೇರಿಯ ಕಟ್ಟಡ ದುರಸ್ತಿಗೆ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ 8 ಲಕ್ಷ ಅನುದಾನ ಮಂಜೂರು ಮಾಡಲಾಗುವುದು. ಕಟ್ಟಡ ಚಾವಣಿಯಲ್ಲಿ ನೀರು ನಿಲ್ಲದಂತೆ ತಡೆಗಟ್ಟಬೇಕು. ತುರ್ತಾಗಿ ದುರಸ್ತಿ ಕೆಲಸ ಮಾಡಬೇಕು’ ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.