ಶಿಗ್ಗಾವಿ: ಪಟ್ಟಣದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಸರಣಿ ಕಳ್ಳತನದಿಂದ ಕಳುವಾಗಿದ್ದ ₹5.91ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಹಳೇ ಬಸ್ ನಿಲ್ದಾಣಕ್ಕೆ ಹೋಗುವ ಮುಖ್ಯ ಪೇಟೆ ರಸ್ತೆಯಲ್ಲಿ ಕಳೆದ ಮೇ 24ರಂದು ನಡೆದ ಸರಣಿ ಕಳ್ಳತನ ಜನರಲ್ಲಿ ಭಯ ಮೂಡಿಸಿತ್ತು. ಅಂದು ಔಷಧ ಅಂಗಡಿ, ಸ್ಟುಡಿಯೋ, ಕಿರಾಣಿ ಅಂಗಡಿ, ಎಸ್ಬಿಐ ಬ್ಯಾಂಕಿನ ಗ್ರಾಹಕರ ಸೇವಾ ಕೇಂದ್ರ, ಜೆರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಅಂಗಡಿ ಸೇರಿದಂತೆ ಹತ್ತಕ್ಕೂ ಹೆಚ್ಚು ಅಂಗಡಿಗಳಲ್ಲಿ ಕಳ್ಳತನ ನಡೆದಿತ್ತು. ಈದೀಗ ಪೊಲೀಸರು ಆ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದ ಯಾದಗಿರಿ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸಂಗಮೇಶ ಬಸವರಾಜ ಬಿರಾದಾರ್ (21) ಹಾಗೂ ಬಸವರಾಜ ಸಿದ್ದಯ್ಯಸ್ವಾಮಿ ಹಿರೇಮಠ (19) ಆರೋಪಿಗಳನ್ನು ಬಂಧಿಸಲಾಗಿದೆ. ಬಂದಿತ ಆರೋಪಿಗಳಿಂದ 3 ಕ್ಯಾಮೆರಾಗಳು, 2 ಮೋಟಾರ್ ಬೈಕ್ಗಳು, 1 ಲ್ಯಾಪ್ಟಾಪ್, 1 ಆ್ಯಪಲ್ ಫೋನ್ ಹಾಗೂ ಒಂದು ಆ್ಯಂಡ್ರಾಯ್ಡ್ ಫೋನ್ ಸೇರಿದಂತೆ ಒಟ್ಟು ₹5.91ಲಕ್ಷ ಮೌಲ್ಯದ ವಸ್ತಗಳನ್ನ ವಶಪಡಿಸಿಕೊಳ್ಳಲಾಗಿದೆ.
ಕಳ್ಳತನವಾದ ವಸ್ತುಗಳು ಮತ್ತು ಆರೋಪಿತರ ಪತ್ತೆಗಾಗಿ ಹಾವೇರಿ ಎಸ್.ಪಿ ಅಂಶುಕುಮಾರ್, ಹೆಚ್ಚುವರಿ ಎಸ್ಪಿ ಗೋಪಾಲ್ ಸಿ. ಡಿವೈಎಸ್ಪಿ ಮಂಜುನಾಥ್ ಜಿ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಅವರ ಮಾರ್ಗದರ್ಶನದಲ್ಲಿ ಪೊಲೀಸರ ತಂಡವನ್ನ ರಚಿಸಿ ಕಳ್ಳರ ಪತ್ತೆಗಾಗಿ ಬಲೆ ಬೀಸಲಾಗಿತ್ತು.
ಕಾರ್ಯಾಚರಣೆಯಲ್ಲಿ ಸಿಪಿಐ ಶ್ರೀದೇವಿ ಪಾಟೀಲ, ಪಿಎಸ್ಐ ಪಿ.ಎಫ್.ನೀರೂಳ್ಳಿ, ಪಿಎಸ್ಐ ಉಮಾ ಪಾಟೀಲ, ಪೊಲೀಸ್ ಠಾಣೆ ಸಿಬ್ಬಂದಿಯಾದ ಪಿ.ಆರ್.ಕೊಳೂರ, ವೆಂಕಟೇಶ್ ಲಮಾಣಿ, ಯಲ್ಲಪ್ಪ ಕುರಿ, ಬೀರಪ್ಪ ಕಳ್ಳಿಮನಿ, ಆನಂದ್ ದೊಡ್ಡಮನಿ, ಎಂ.ಬಿ.ಸಾತಣ್ಣವರ, ಸಂಜು ರಾಯಣ್ಣವರ, ಯಲ್ಲಪ್ಪ ತಳವಾರ, ಎಸ್.ಪಿ.ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ಸತೀಶ ಮಾರಕಟ್ಟಿ, ಮಾರುತಿ ಹಾಲಬಾವಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.