ಶಿಗ್ಗಾವಿ: ತಂಬಾಕು ಸೇವನೆ ಸಮಾಜಕ್ಕೆ ಮಾರಕವಾಗಿದ್ದು, ಅದರಿಂದ ದೂರವಾಗುವುದರ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿ.ಪಂ.ಸಿಇಒ ಅಕ್ಷಯ ಶ್ರೀಧರ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಶುಕ್ರವಾರ ಗ್ರಾಮೀಣ ಆರೋಗ್ಯ ಅರಿವು ಮೂಡಿಸುವ ವಿಭಾಗ, ಜಿಲ್ಲಾ ಪಂಚಾಯ್ತಿ, ತಾ.ಪಂ. ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ತಂಬಾಕು ಸೇವನೆ ತಡೆ ಆರೋಗ್ಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸದೃಢ ಸಮಾಜ ನಿರ್ಮಾಣಕ್ಕಾಗಿ ಯುವಕರು ದುಶ್ಚಟಗಳನ್ನು ಬಿಡಬೇಕು. ತಂಬಾಕು ಸೇವನೆ ಒಂದು ಚಟವಾಗಿ ಬೆಳೆಯುತ್ತಿದೆ. ಅದರಿಂದಾಗಿ ಇಡೀ ಕುಟುಂಬ ಬೀದಿಗೆ ಬೀಳುವಂತಾಗುತ್ತಿದೆ. ಕುಟುಂಬದ ಹಿತದೃಷ್ಟಿಯಿಂದ ಮತ್ತು ಆರೋಗ್ಯಕರ ಬದುಕು ಸಾಗಿಸಲು ಮುಂದಾಗಬೇಕು’ ಎಂದರು.
ತಾಪಂ.ಇಒ ಪಿ.ವಿಶ್ವನಾಥ, ಧಾರವಾಡ ಮಂಜುನಾಥೇಶ್ವರ ದಂತ ಕಾಲೇಜಿನ ಡಾ.ಹೇಮಾ, ಡಾ.ಕಲ್ಪನಾ, ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ಪ್ರಕಾಶ ಔದಕರ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸತೀಶ, ಡಾ.ವಿದ್ಯಾ ಸೇರಿದಂತೆ ತಾಲ್ಲೂಕು ಪಂಚಾಯ್ತಿ ಕಚೇರಿ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.