ಬ್ಯಾಡಗಿ: ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಿ ಸಂಘಟಿತ ಹೋರಾಟ ನಡೆಸಿದ್ದಲ್ಲಿ ಯಶಸ್ಸು ಸಾಧ್ಯವಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
ಪಟ್ಟಣದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಲಿಂ.ಹಾನಗಲ್ ಶ್ರೀಕುಮಾರ ಶಿವಯೋಗಿಗಳ 157ನೇ ಜಯಂತ್ಯುತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಉಪಕಾರಕ್ಕಾಗಿ ಸಂಪಮ್ಮೂಲ ಹೆಚ್ಚಿಸಿಕೊಳ್ಳಬೇಕಾಗಿದೆ. ನಮ್ಮ ಮಕ್ಕಳು ಸುಶಿಕ್ಷಿತರಾಗಬೇಕಾಗಿದೆ. ನಾವು ಸಂಘಟಿತರಾಗಬೇಕಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಹತ್ತು ಸಾವಿರ ಜನರು ನೋಂದಾಯಿಸಬೇಕಾಗಿದೆ. ನಮ್ಮ ಸಮಾಜ ರಾಜ್ಯದ ಜನರಿಗೆ ಅನ್ನ, ಶಿಕ್ಷಣ, ಉದ್ಯೋಗ ನೀಡುವ ಮೂಲಕ ಉದಾರತೆ ತೋರುತ್ತಿದೆ. ಆದರೆ ನಮ್ಮಲ್ಲಿರುವ ಅಭಿಮಾನದ ಶೂನ್ಯತೆಯಿಂದ ರಾಜ್ಯದಲ್ಲಿ 3 ಕೋಟಿಗೂ ಅಧಿಕ ವೀರಶೈವ ಲಿಂಗಾಯತ ಸಮಾಜ ಅಲ್ಪಸಂಖ್ಯಾತರಂತೆ ಕಾಣುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ಸಮಾಜದ ಜನರ ಮೂಲವೃತ್ತಿ ಕೃಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಉದ್ದಿಮೆ, ವ್ಯಾಪಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹೆಜ್ಜೆ ಇಟ್ಟಿದ್ದು, ಒಳಪಂಗಡಗಳಲ್ಲಿರುವ ಭಿನ್ನಾಭಿಪ್ರಾಯದಿಂದ ವೀರಶೈವ ಲಿಂಗಾಯತ ಸಮಾಜ ಅಪಾಯದ ಅಂಚಿಗೆ ತಲುಪಿದೆ ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ನಮ್ಮಲ್ಲಿ ಭಿನ್ನಾಭಿಪ್ರಾಯದಿಂದ ಇಂದು ಲಿಂಗಾಯತರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ ಎಂದರು.
ತಾಲ್ಲೂಕು ಘಟಕದ ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ ಸಮುದಾಯದಲ್ಲಿ ತುಳಿದು ಬದುಕುವರಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾಗಿದ್ದು, ಸಂಘಟನೆಯಿಂದ ಮೆಟ್ಟಿ ನಿಲ್ಲಬೇಕಾಗಿದೆ ಎಂದರು.
ಬೆಳಗಾವಿ ಕಾರಂಜಿಮಠದ ಡಾ.ಶಿವಯೋಗಿ ದೇವರು ಮತ್ತು ಗುರು ಕುಮಾರೇಶ್ವರ ಧಾರ್ಮಿಕ ಪಾಠ ಶಾಲೆಯ ಮುಖ್ಯಸ್ಥ ರಾಚಯ್ಯನವರು ಓದಿಸೋಮಠ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಪಿ.ಟಿ.ಲಕ್ಕಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ ಮಠದ ನಿರೂಪಿಸಿದರು. ಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಅಂಕಲಕೋಟಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ, ಗಂಗಣ್ಣ ಎಲಿ, ಶಂಕರಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಭಾರತಿ ಜಂಬಗಿ, ಶಂಭು ಚಕ್ಕಡಿ, ಮಾಲತೇಶ ವೀರಾಪುರ, ಶಂಭು ಮಠದ, ಮಲ್ಲಿಕಾರ್ಜುನ ಬಳ್ಳಾರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಮುಖ್ಯಾಧಿಕಾರಿ ವಿನಯಕುಮಾರ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.