ರಾಣೆಬೆನ್ನೂರು: ಬರಗಾಲ, ಮಳೆ ಕೊರತೆ, ಬತ್ತಿದ ಅಂರ್ತಜಲ, ಅಧಿಕ ಉಷ್ಣಾಂಶ... ಹೀಗೆ ಸಾಲು ಸಾಲು ಸಮಸ್ಯೆಗಳಿಗೆ ಹೈರಾಣಾಗಿ ಕೂತ ರೈತರ ಮಧ್ಯ ಕಲ್ಲಂಗಡಿ ಬೆಳೆದು ಉತ್ತಮ ಆದಾಯ ಪಡೆದ ತಾಲ್ಲೂಕಿನ ಕಾಕೊಳ ಗ್ರಾಮದ ರೈತ ಶಿವಪ್ಪ ನವಲಿ ಮಾದರಿಯಾಗಿದ್ದಾರೆ.
ಹತ್ತಾರು ವರ್ಷಗಳಿಂದ ಏಕ ಬೆಳೆ ಬೆಳೆದಿದ್ದ ಶಿವಪ್ಪ ಅವರು ಹೊಸ ಪ್ರಯೋಗಕ್ಕೆ ಒಡ್ಡಿ, ಯಶಸ್ವಿಯಾಗಿದ್ದಾರೆ. ರಾಸಾಯನಿಕ ಗೊಬ್ಬರವನ್ನು ಬಿಟ್ಟು, ಸಾವಯವ ಕೃಷಿ ಬಳಕೆ ಮಾಡಿ, ಹೆಚ್ಚು ನಿಗಾ ವಹಿಸಿ ಬೆಳೆ ಆರೈಕೆ ಮಾಡಿದ ಪರಿಣಾಮ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಇವರ ದೊಡ್ಡ ಗಾತ್ರದ, ರುಚಿಕರ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ ಇದೆ. ಬಿಸಿಲು, ಜಾತ್ರೆ, ಶಿವರಾತ್ರಿ ನೆಪದಲ್ಲಿ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಗಿಟ್ಟಿಸಿಕೊಂಡಿದೆ.
‘22 ಎಕರೆ ಜಮೀನಿನಲ್ಲಿ ಒಟ್ಟು 6 ಬೋರ್ವೆಲ್ಗಳಿವೆ. 3 ಬೋರ್ವೆಲ್ಗಳಲ್ಲಿ ಮಾತ್ರ ಅಲ್ಪ ಪ್ರಮಾಣ ನೀರಿದ್ದು, ಅದೂ ಸಾಲದೇ ಇದ್ದಾಗ, ದಿನಕ್ಕೆ ₹1,500 ರಂತೆ 20 ದಿನಕ್ಕೂ ಹೆಚ್ಚು ಕಾಲ ಬಾಡಿಗೆ ನೀರು ಪಡೆದು ಕಲ್ಲಂಗಡಿ ಬೆಳೆ ಉಳಿಸಿಕೊಳ್ಳಬೇಕಾಯಿತು. ಸಮಯಕ್ಕೆ ಸರಿಯಾಗಿ ಔಷಧಿ ಹಾಗೂ ಹನಿ ನೀರಾವರಿಯಿಂದ ನೀರು ನಿರ್ವಹಣೆ ಮಾಡಿದ್ದರಿಂದ ಉತ್ತಮ ಬೆಳೆ ಪಡೆಯಲು ಸಾಧ್ಯವಾಗಿದೆ. ಒಟ್ಟು ನಾಲ್ಕು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದು ಅದರಲ್ಲಿ ಈಗಾಗಲೇ ಎರಡು ಎಕರೆ ಜಮೀನಿನಲ್ಲಿ ಎರಡು ಬಾರಿ ಕಟಾವು ಮಾಡಲಾಗಿದೆ’ ಎನ್ನುತ್ತಾರೆ ರೈತ ಶಿವಪ್ಪ.
ಒಟ್ಟು 25 ಟನ್ ಉತ್ತಮ ಇಳುವರಿ ಪಡೆದಿದ್ದಾರೆ. ಉಳಿದಿರುವ ಎರಡು ಎಕರೆಯಲ್ಲಿ ಇನ್ನು 25 ಟನ್ ಕಲ್ಲಂಗಡಿ ಬೆಳೆ ಬರುವ ನಿರೀಕ್ಷೆ ಇದೆ. ಈವರೆಗೆ ಒಟ್ಟು ₹ 1.5 ಲಕ್ಷ ನಿವ್ವಳ ಆದಾಯ ಲಭಿಸಿದೆ. 4 ಎಕರೆ ಶೇಂಗಾ, 2 ಎಕರೆ ಜೋಳ ಕೂಡ ಬೆಳೆದಿದ್ದಾರೆ.
ಇಂತಹ ಕಠಿಣ ಪರಿಸ್ಥಿತಿಯಲ್ಲೂ ಉತ್ತಮ ಇಳುವರಿ ತೆಗೆದಿದ್ದಕ್ಕಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ರೈತ ಜಾಗೃತಿ ಕಾರ್ಯಕ್ರಮದಲ್ಲಿ ರೈತ ಶಿವಪ್ಪ ಚನ್ನಬಸಪ್ಪ ನವಲಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
Highlights - null
Quote - ರಾಸಾಯನಿಕ ಗೊಬ್ಬರದ ವಿಪರೀಪ ಬಳಕೆಯಿಂದ ನಷ್ಟ ಹೊಂದಿದ್ದ ಪರಿಣಾಮ ಸಾವಯವ ಕೃಷಿ ಅಳವಡಿಸಿಕೊಂಡಿದ್ದೆ. ಪರಿಣಾಮ ಉತ್ತಮ ಇಳುವರಿ ಲಭಿಸಿದೆ ಶಿವಪ್ಪ ನವಲಿ ರೈತ
Quote - ಬರಗಾಲದಲ್ಲಿಯೂ ಹನಿ ನೀರಾವರಿ ತಿಪ್ಪೆ ಗೊಬ್ಬರ ಹಾಗೂ ಜೈವಿಕ ಉತ್ಪನ್ನ ಬಳಕೆ ಮಾಡಿ ನಾಲ್ಕು ಎಕರೆ ಕಲ್ಲಂಗಡಿ ಬೆಳೆದ ಶಿವಪ್ಪ ಅವರು ಮಾದರಿ ರೈತ ಡಾ.ಗಂಗಯ್ಯ ಕುಲಕರ್ಣಿ ಕೃಷಿ ಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.