ಕಲಬುರಗಿ: ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲ ಹೀಗೆ ಎರಡು ಪ್ರಕೃತಿಯ ಅತಿರೇಕಗಳಿಂದ ನಲುಗಿರುವ ಜಿಲ್ಲೆಯ ರೈತರಿಗೆ ಪ್ರಸಕ್ತ ವರ್ಷ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿ ಅವಕಾಳಿ ಮಳೆ ಸುರಿಯುತ್ತಿರುವುದರಿಂದ ಹೊಲಗಳನ್ನು ಹದ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 8.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆ ಹೊಂದಲಾಗಿದೆ.
ಜಿಲ್ಲೆಯ ಹಲವೆಡೆ ಈಗಾಗಲೇ ಒಂದೆರಡು ಮಳೆ ಬಿದ್ದಿದ್ದರಿಂದ ನೆಲ ತಂಪಾಗಿದೆ. ಕಳೆದ ಮೂರು ತಿಂಗಳಿಂದ ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ರೈತರು ಹೊಲದಲ್ಲಿ ಕುಂಟಿ ಹೊಡೆಯಲು ಎತ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ, ಸೋಯಾ, ಹೆಸರು, ಉದ್ದು ಬೆಳೆಯಲು ಪೂರಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಕಳೆದ ಬಾರಿ ಅನಾವೃಷ್ಟಿಯಿಂದ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ತೊಗರಿ ಕೈಕೊಟ್ಟಿತ್ತು. ಎರಡು ಬಾರಿ ಬಿತ್ತನೆ ಮಾಡಿದರೂ ಮಳೆಯ ಅಭಾವದಿಂದಾಗಿ ಕಾಯಿ ಕಟ್ಟಿರಲಿಲ್ಲ. ಹೀಗಾಗಿ, ರೈತರು ನಷ್ಟದ ಸುಳಿಗೆ ಸಿಲುಕಿದ್ದರು.
ಅದರಲ್ಲೂ, ಅತಿ ಹೆಚ್ಚು ತೊಗರಿ ಬೆಳೆಯುವ ಅಫಜಲಪುರ, ಜೇವರ್ಗಿ, ಶಹಾಬಾದ್, ಚಿತ್ತಾಪುರ, ಸೇಡಂ, ಆಳಂದ ತಾಲ್ಲೂಕಿನ ಹಲವೆಡೆ ರೈತರು ಇಳುವರಿ ಬಾರದೇ ತೀವ್ರ ನಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ರೈತರ ಕೈಗೆ ಹಣ ಸಿಗಲೇ ಇಲ್ಲ. ಸಾಲದ ಮೊತ್ತ ಏರುತ್ತಲೇ ಇತ್ತು. ಬೆಳೆ ವಿಮೆ, ಬೆಳೆ ನಷ್ಟ ಪರಿಹಾರವನ್ನು ರಾಜ್ಯ ಸರ್ಕಾರ ಹಾಗೂ ವಿಮಾ ಕಂಪನಿಗಳು ಬಿಡುಗಡೆ ಮಾಡಿದ್ದರಿಂದ ರೈತರಿಗೆ ಒಂದಷ್ಟು ಸಮಾಧಾನ ತಂದಿದೆ. ಅದೇ ಹಣವನ್ನು ಬಳಸಿಕೊಂಡು ಇದೀಗ ಬಿತ್ತನೆ ಬೀಜ, ಗೊಬ್ಬರವನ್ನು ಖರೀದಿಸಲು ಮುಂದಾಗಿದ್ದಾರೆ.
ಈ ಬಾರಿ ಮುಂಗಾರು ಉತ್ತಮವಾಗಿರುವುದರಿಂದ ಅಲ್ಪಾವಧಿಯ ಬೆಳೆಗಳಾದ ಹೆಸರು, ಸೋಯಾ, ಉದ್ದು, ಅಲಸಂದೆ ಕಾಳು ಬೆಳೆಯಲು ರೈತರು ನೆಲವನ್ನು ಹದಗೊಳಿಸುತ್ತಿದ್ದಾರೆ. ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಹುತೇಕ ರೈತರು ಈ ಬೆಳೆಗಳನ್ನು ಬೆಳೆದಿರಲಿಲ್ಲ. ಜುಲೈನಲ್ಲಿ ಅಲ್ಪ ಮಳೆ ಬಂದರೂ ಅದಾಗಲೇ ಈ ಬೆಳೆಗಳನ್ನು ಬೆಳೆಯುವ ಮಿತಿ ಮುಗಿದು ಹೋಗಿತ್ತು. ಹೀಗಾಗಿ, ರೈತರು ನೇರವಾಗಿ ತೊಗರಿ ಬಿತ್ತನೆ ಮಾಡಿದರು. ಆದರೆ, ತೊಗರಿ ಬೀಜ ಮೊಳಕೆಯೊಡೆಯಲೇ ಇಲ್ಲ. ಇದರಿಂದ ಬೇಸತ್ತ ರೈತರು ಹೊಲವನ್ನು ಹರಗಿದರು. ಬೆಳೆಯ ಆಸೆಯನ್ನೇ ಕೈಬಿಟ್ಟು ಕೂಲಿ ಕೆಲಸ ಮಾಡಲು ಬೇರೆ ಕಡೆ ತೆರಳಿದರು.
ಇಳುವರಿ ಕಡಿಮೆ ಆಗಿದ್ದರಿಂದ ಮಾರುಕಟ್ಟೆಗೆ ತೊಗರಿ ಆವಕವೂ ಕಡಿಮೆಯಾಯಿತು. ಹೀಗಾಗಿ, ತೊಗರಿ ದರ ಒಂದು ಹಂತದಲ್ಲಿ ಕ್ವಿಂಟಲ್ಗೆ ₹ 13 ಸಾವಿರ ದಾಟುವ ಮೂಲಕ ಸಾರ್ವಕಾಲಿನ ದಾಖಲೆಯನ್ನು ಬರೆದಿತ್ತು.
ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಳ್ಳಲು ಕಾರಣವಾಗಿದೆ. ಸರಾಸರಿ 15 ಮಿ.ಮೀ. ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, ಈಗಾಗಲೇ 33 ಎಂ.ಎಂ. ಬಿದ್ದಿದ್ದು, ಶೇ 119ರಷ್ಟಾಗುತ್ತದೆ. ಮೇ 31ರಂದು ಮುಂಗಾರು ರಾಜ್ಯ ಪ್ರವೇಶಿಸುವ ಸಾಧ್ಯತೆ ಇದ್ದು, ಅಲ್ಪಾವಧಿಯ ಬೆಳೆ ಹಾಗೂ ಅಂತರ ಬೆಳೆಗಳನ್ನು ಬೆಳೆಯಲು ರೈತರು ಸಿದ್ಧತೆ ನಡೆಸಿದ್ದಾರೆ ಎನ್ನುತ್ತಾರೆ ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್.
ಪೂರಕ ಮಾಹಿತಿ: ಜಗನ್ನಾಥ ಡಿ. ಶೇರಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.