ಶಹಾಬಾದ್: ತಾಲ್ಲೂಕಿನ ಭಂಕೂರ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಶನಿವಾರ ಮಧ್ಯಾಹ್ನ ಕಾರು–ಸ್ಕಾರ್ಪಿಯೋ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಕಾರಿನ ಹಿಂದಿದ್ದ ದ್ವಿಚಕ್ರ ವಾಹನ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಒಟ್ಟು ಐವರು ಗಾಯಗೊಂಡಿದ್ದಾರೆ.
ಮೃತರು ಉತ್ತರ ಪ್ರದೇಶದ ಮೂಲದವರಾಗಿದ್ದು, ಹಲವು ವರ್ಷಗಳಿಂದ ವಿಜಯಪುರದ ಝಂಡಾಕಟ್ಟಾ ಪ್ರದೇಶದಲ್ಲಿ ವಾಸವಾಗಿದ್ದರು. ಹಳೆಬಟ್ಟೆಗಳನ್ನು ಖರೀದಿಸಿ, ಜಮಖಾನೆ ಮಾಡಿ, ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದಿದೆ.
ಕಲಬುರಗಿಯಿಂದ–ಯಾದಗಿರಿಗೆ ವ್ಯಾಪಾರಕ್ಕೆ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದರು. ಶಹಾಬಾದ್ ಸಮೀಪದ ಶಂಕರವಾಡಿ ಕಾಗಿಣಾ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ, ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ಕಲಬುರಗಿಗೆ ಹಿಂತಿರುಗುತ್ತಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹಣಮಂತ, ಸಹಾಯಕ ಎಂಜಿನಿಯರ್ ಶರಣು ಅವರಿದ್ದ ವಾಹನವನ್ನು ಚಾಲಕ ಹರೀಶ ತೀವ್ರ ನಿರ್ಲಕ್ಷ್ಯದಿಂದ ವೇಗವಾಗಿ ಓಡಿಸಿ, ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಪರಿಣಾಮ ಕಾರು ಚಾಲಕ ಜಾಹೀದ್ ಅಯ್ಯಬ್ ಖಾನ್ ಪಠಾಣ(30) ಸ್ಥಳದಲ್ಲಿಯೇ ಮೃತ ಪಟ್ಟರೆ, ಶಾಕೀರ ವಾಜೀದ ಅಲಿ (20) ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಕಾರಿನಲ್ಲಿದ್ದ ಅಸ್ಲಾಂ ಅಲಿಯಾಸ್ ನಂದು ಸ್ಕಾರ್ಪಿಯೋದ ಚಾಲಕ ಹರೀಶ, ಹಣಮಂತ, ಶರಣು ಗಾಯಗೊಂಡಿದ್ದಾರೆ. ಇದೇ ವೇಳೆ ಕಲಬುರಗಿಯಿಂದ ಕಡೆಯಿಂದ ಕಾರಿನ ಹಿಂದೆ ಬರುತ್ತಿದ್ದ ಬೈಕ್ ಸವಾರ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಸರು ತಿಳಿದು ಬಂದಿಲ್ಲ.
ಘಟನೆಯು ಸ್ಥಳಕ್ಕೆ ಧಾವಿಸಿದ ಸಿಪಿಐ ನಟರಾಜ ಲಾಡೆ ಹಾಗೂ ಸಿಬ್ಬಂದಿಯು, ಗಾಯಾಳುಗಳನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಸಾಧಿಸಿದ್ದಾರೆ. ಈ ಕುರಿತು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.