ಕಮಲಾಪುರ: ‘ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದೇವಲುನಾಯಕ ತಾಂಡಾದ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ ತಿಳಿಸಿದ್ದಾರೆ.
2021–2022ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ₹ 13.25 ಲಕ್ಷ, 2023–2024 ನೇ 15ನೇ ಹಣಕಾಸು ಯೋಜನೆ ಅಡಿಯಲ್ಲಿ ₹13.85 ಲಕ್ಷ ಹಾಗೂ ಎಸ್ಎಫ್ಸಿ ಕುಡಿಯುವ ನೀರು ನಿರ್ವಹಣೆ ಅನುದಾನದಲ್ಲಿ ₹ 1.25 ಲಕ್ಷ ಒದಗಿಸಲಾಗಿದೆ. ಕಾಮಗಾರಿ ಟೆಂಡರ್ ಹಂತದಲ್ಲಿದೆ. ಓಕಳಿ ಕ್ರಾಸ್ ಬಳಿಯ ಪಶು ಆಸ್ಪತ್ರೆ ಬಳಿ ಬೋರವೆಲ್ ಕೊರೆಯಿಸಿ ಅಲ್ಲಿಂದ 3 ಕಿ.ಮೀ ಪೈಪ್ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಂದು ವೇಳೆ ಬೋರವೆಲ್ಗೆ ನೀರು ಸಿಗದಿದ್ದರೆ ಅಂಬೇಡ್ಕರ್ ಕಾಲೊನಿಯಿಂದ ದೇವಲು ನಾಯಕ ತಾಂಡಾದವರೆಗೆ ಪೈಪ್ಲೈನ್ ಕಾಮಗಾರಿ ಕೈಗೊಂಡು ಬೆಳಕೋಟಾ ಜಲಾಶಯದ ನೀರು ಸರಬರಾಜು ಮಾಡಲಾಗುವುದು. ತುರ್ತು ಪರಿಹಾರಕ್ಕೆ ಈಗಾಗಲೇ ಬೋರವೆಲ್ ಕೊರೆಸಲಾಗಿದೆ. ನೀರು ಸಿಕ್ಕಿಲ್ಲ. ಹಳೆ ಬೋರ್ವೆಲ್ಗೆ ಕೇಸಿಂಗ್ ಪೈಪ್ ಅಳವಡಿಸಲಾಗಿದೆ. ಬೋರವೆಲ್ನಿಂದ ತಾಂಡಾವರೆಗೆ ಹೊಸ ಪೈಪ್ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಸದ್ಯ ನೀರು ಸರಬರಾಜಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಈ ಕುರಿತು ಕಳೆದ ಜೂ. 30 ರಂದು ಪ್ರಜಾವಾಣಿಯಲ್ಲಿ 'ದೇವಲು ನಾಯಕ ತಾಂಡಾದಲ್ಲಿ ಕುಡಿಯುವ ನೀರಿಗೆ ಹಾಹಾಕಾರ' ಶೀರ್ಷಿಕೆಯ ಅಡಿಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.