ಅಫಜಲಪುರ: ಮುಂಗಾರು ಮಳೆ ಸಮರ್ಪಕವಾಗಿ ಬೀಳದ್ದರಿಂದ ಸೊನ್ನ ಬ್ಯಾರೇಜ್ನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸಂಗ್ರಹವಾದ ನೀರು ಹರಿಯದೇ ನಿಂತಿತ್ತು. ಅದರೊಂದಿಗೆ ಸೇರಿದ ಹೊಸ ನೀರು ಸಹ ಕಲುಷಿತವಾಗಿದೆ. ಹಸಿರು ಬಣ್ಣಕ್ಕೆ ತಿರುಗಿ ದುರ್ವಾಸನೆ ಬರುತ್ತಿದೆ. ಪಟ್ಟಣದ ಚರಂಡಿ ನೀರು ನೇರವಾಗಿ ಭೀಮಾ ನದಿ ಸೇರುತ್ತದೆ. ತೀರದ ಸುಮಾರು 40 ಗ್ರಾಮಗಳ ಜನರಿಗೆ ಕುಲುಷಿತ ನೀರೇ ಅನಿವಾರ್ಯವಾಗಿದೆ.
‘ಪುರಸಭೆಯವರು ಯಾವುದೇ ನೀರು ಶುದ್ಧೀಕರಣ ಘಟಕ ಅಳವಡಿಸಿಲ್ಲ. 30 ವರ್ಷಗಳ ಹಿಂದಿನ ಶುದ್ದೀಕರಣ ಘಟಕ ಹಾಳಾಗಿ ಹೋಗಿ 20 ವರ್ಷಗಳ ಕಳೆದರೂ ದುರಸ್ತಿ ಮಾಡಿಲ್ಲ. ಅನೇಕ ಸಂಘಟನೆಗಳು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಪುರಸಭೆಯ ಮಾಜಿ ಸದಸ್ಯರಾದ ಮಳೆಂದ್ರ ಡಾಂಗೆ ತಿಳಿಸಿದರು.
‘ಈ ಗ್ರಾಮಗಳಲ್ಲಿ ಇದ್ದ ನೀರು ಶುದ್ಧೀಕರಣ ಘಟಕಗಳು ಹಾಳಾಗಿವೆ. ನಿರ್ವಹಣೆ ಹೊಣೆ ಹೊತ್ತ ಗ್ರಾಮ ಪಂಚಾಯಿತಿಗಳು ದುರಸ್ತಿ ಮಾಡಿಸುವುದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಜನಪ್ರತಿನಿಧಿಗಳು ಆಸಕ್ತಿ ವಹಿಸುತ್ತಿಲ್ಲ’ ಎಂದು ನದಿ ತೀರದ ಗ್ರಾಮಸ್ಥರ ಅಸಮಾಧಾನ.
ತಾಲ್ಲೂಕಿನ ಬಂದರವಾಡ ಗ್ರಾಮಕ್ಕೆ ಭೀಮಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲು ಸಾಕಷ್ಟು ಅನುದಾನ ಖರ್ಚು ಮಾಡಿದರೂ ಯೋಜನೆ ವಿಫಲವಾಗಿದೆ ಎಂದು ರೈತ ಮುಖಂಡ ಲಕ್ಷ್ಮಣ ಕಟ್ಟಿಮನಿ ಹೇಳುತ್ತಾರೆ.
‘ತಾಲ್ಲೂಕಿನಲ್ಲಿ ಕಳೆದ 20 ವರ್ಷಗಳಲ್ಲಿ ಸುಮಾರು 10 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲಾ ಘಟಕಗಳು ಹಾಳುಬಿದ್ದಿವೆ. ಕೆಲವೊಂದಕ್ಕೆ ನೀರು ಇಲ್ಲ. ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ’ ಎಂದು ಮಾಶಾಳದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನಿರ್ದೇಶಕ ಶಿವು ಪ್ಯಾಟಿ ಹೇಳುತ್ತಾರೆ.
ಜೆಎಂಜೆಎಂ ಯೋಜನೆ ಫಲಕಾರಿಯಾಗಿಲ್ಲ. ಹಲವಾರು ಯೋಜನೆಗಳು ಅನುಷ್ಠಾನಗೊಂಡರು ನೀರು ಶುದ್ಧ ನೀರು ಎನ್ನುವುದು ಗಗನ ಕುಸುಮವಾಗಿದೆ. ಈ ಕುರಿತು ಶಾಸಕರು ಹಲವಾರು ಬಾರಿ ಸಭೆ ನಡೆಸಿದರು ಫಲಕಾರಿಯಾಗಿಲ್ಲ ಎಂದು ನದಿ ತೀರದ ಜನರು ಹೇಳುತ್ತಾರೆ.
ನೀರು ಶುದ್ಧೀಕರಣ ಘಟಕ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈಗಾಗಲೇ ಸುಮಾರು ₹62 ಕೋಟಿ ವೆಚ್ಚದಲ್ಲಿ ಭೀಮಾ ಬ್ಯಾರೇಜ್ನಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಮುಗಿಯುವ ಹಂತದಲ್ಲಿದೆ. ಯೋಜನೆ ಪೂರ್ಣಗೊಂಡರೆ ನಿರಂತರವಾಗಿ ಪಟ್ಟಣಕ್ಕೆ ಶುದ್ಧ ನೀರು ಪೂರೈಕೆಯಾಗುತ್ತದೆ- ವಿಜಯಮಹಾಂತೇಶ ಹೂಗಾರ ಪುರಸಭೆ ಮುಖ್ಯಾಧಿಕಾರಿ
ಭೀಮಾ ಬ್ಯಾರೇಜ್ನಿಂದ ಪಟ್ಟಣಕ್ಕೆ ಶುದ್ಧ ನೀರು ಪೂರೈಕೆ ಮಾಡುವ ಕಾಮಗಾರಿ ಮುಗಿದಿದೆ. ಪಂಪ್ಸೆಟ್ ಅಳವಡಿಸಿ ನೀರು ಪೂರೈಕೆ ಮಾಡಬೇಕು ಮತ್ತು ಜಾಕ್ವೆಲ್ ಬಳಿ ಬಂಡ್ ಕಟ್ಟುವುದರಿಂದ ಯಾವ ಪ್ರಯೋಜನ ಆಗುವುದಿಲ್ಲ- ಶಂಕ್ರಮ್ಮ ಪ್ರಭು ಹರಳಯ್ಯ ಪುರಸಭೆ ಸದಸ್ಯೆ
ನೀರು ಹರಿಯದೆ ನಿಂತಿರುವುದರಿಂದ ಮಾಲಿನ್ಯವಾಗಿದೆ. ಆ ನೀರು ಕುಡಿಯಲು ಯೋಗ್ಯಗಿರುವ ಬಗ್ಗೆ ಪುರಸಭೆಯವರು ಪರೀಕ್ಷೆ ಮಾಡಿ ನೀರು ಬಿಡುತ್ತಾರೆ. ಭೀಮಾ ಜಲಾಶಯದಲ್ಲಿ 3.116 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯಯಿದ್ದು ಸದ್ಯ 0.448 ಟಿಎಂಸಿ ಅಡಿ ನೀರಿದೆ. ಆ ನೀರನ್ನು ಪಟ್ಟಣದ ಜನರಿಗೆ ಕುಡಿಯಲು ಮಾತ್ರ ಬಿಡುತ್ತಿದ್ದೇವೆ - ಸಂತೋಷಕುಮಾರ ಸಜ್ಜನ್ ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.