ಕಲಬುರಗಿ: ‘371 (ಜೆ) ವಿರೋಧಿಸಿ ಬೆಂಗಳೂರಿನ ಸಂಘಟನೆಯ ಕೆಲವರು ಹೋರಾಟ ನಡೆಸಿದ್ದು ಖಂಡನೀಯ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ್ ಸಿಂಗ್ ಕಿಡಿಕಾರಿದ್ದಾರೆ.
‘ಹಸಿರು ಪ್ರತಿಷ್ಠಾನ ಸಂಘಟನೆಯ ಮೂಲಕ ಕೆಲವರು ಸೇರಿಕೊಂಡು ಇಂತಹ ಹೇಳಿಕೆ, ಹೋರಾಟಗಳ ಮೂಲಕ ಕಲ್ಯಾಣದ ಜನರ ಭಾವನೆಗಳನ್ನು ಕೆಣಕುವ ಪ್ರಯತ್ನ ಮಾಡಿರೋದು ಸರಿಯಲ್ಲ. ಹೀಗೆ ಮಾಡುವ ಮುನ್ನ ಅವರೆಲ್ಲ ಅಭಿವೃದ್ಧಿ ಹಾಗೂ ಪ್ರಾದೇಶಿಕ ಅಸಮಾನತೆ ವಿಚಾರದಲ್ಲಿ ಕಲ್ಯಾಣದ ಜಿಲ್ಲೆಗಳ ಜನರು ಅನುಭವಿಸಿದ, ಇಂದಿಗೂ ಅನುಭವಿಸುತ್ತಿರುವ ನೋವು–ಯಾತನೆ ಅರಿಯಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಜಾರಿಗೆ ಬಂದ 371 (ಜೆ) ಕಲಂ ನಮ್ಮ ಹಕ್ಕು. ಕಲ್ಯಾಣ ಕರ್ನಾಟಕಕ್ಕೆ ಜಾರಿಯಾಗಿರುವ ವಿಶೇಷ ಸ್ಥಾನಮಾನದಿಂದ ರಾಜ್ಯದ ಸರ್ಕಾರಿ ಸೇವೆಗಳಲ್ಲಿ ಹೆಚ್ಚಿನ ಪಾಲು ಕಲ್ಯಾಣ ಕರ್ನಾಟಕದವರೇ ಪಡೆಯುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿರೋದು ಸರಿಯಲ್ಲ. ಈ ವಿಷಯವಾಗಿ ಕಲ್ಯಾಣದ ಜನರ ಕೂಗು, ಅಸಮಾಧಾನವನ್ನೆಲ್ಲ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು’ ಎಂದು ಅಜಯ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.