ಆಳಂದ: ‘ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿನ ರಾಘವ ಚೈತನ್ಯಲಿಂಗಕ್ಕೆ ಮಹಾಶಿವರಾತ್ರಿ ದಿನ (ಮಾ.8) ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪೂಜೆ ಮಾಡಲು ಮತ್ತು ರಾಘವ ಚೈತನ್ಯಲಿಂಗದ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಕೈಗೊಳ್ಳಲು ಅನುಮತಿ ನೀಡಬೇಕು’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಅಂದೋಲಾದ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಂದೋಲಾ ಸ್ವಾಮೀಜಿ ಶ್ರೀರಾಮ ಸೇನೆ ಕಾರ್ಯಕರ್ತರೊಂದಿಗೆ ಪುರಸಭೆಗೆ ತೆರಳಿ ಮನವಿ ಸಲ್ಲಿಸಿದರು.
ಕಳೆದ ಮಹಾಶಿವರಾತ್ರಿ ದಿನ ರಾಘವ ಚೈತನ್ಯಲಿಂಗದ ಮಹಾಪೂಜೆಗೆ ತೆರಳಿದ ಸಂದರ್ಭದಲ್ಲಿ ಗಲಾಟೆ ನಡೆದು, ಕಲ್ಲುತೂರಾಟ ನಡೆದು ನೂರಾರು ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂದೋಲಾದ ಸಿದ್ದಲಿಂಗ ಸ್ವಾಮೀಜಿ, ‘ಮಾ.8ರಂದು ಶ್ರೀರಾಮ ಸೇನೆ ಮತ್ತು ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ನೇತೃತ್ವದಲ್ಲಿ ಪೂಜೆ ನಡೆಯಲಿದೆ, ರಾಘವ ಚೈತನ್ಯಲಿಂಗದ ಸುತ್ತಲು ದುಸ್ಥಿತಿ ಇದೆ. ಅದೇ ಸ್ಥಳದ ಜೀರ್ಣೋದ್ದಾರ ಕಾರ್ಯಕ್ಕೆ ಮಂದಿರ ನಿರ್ಮಾಣದ ಸಂಕಲ್ಪದಿಂದ ಈ ಭಾಗದ ಮಠಧೀಶರು, ಹಿಂದೂ ಸಂಘಟನೆಗಳ ಮುಖಂಡರು ಭಾಗಿಯಾಗಿ ಶಂಕುಸ್ಥಾಪನೆ ಕಾರ್ಯ ಮಾಡುತ್ತೇವೆ. ಪುರಸಭೆಯು ಮಂದಿರ ನಿರ್ಮಾಣಕ್ಕೆ ಕಾನೂನು ಅನ್ವಯ ಅನುಮತಿ ನೀಡಬೇಕು’ ತಿಳಿಸಿದರು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಹೇಶ ಗೊಬ್ಬೂರೆ, ತಾಲ್ಲೂಕಾಧ್ಯಕ್ಷ ಈರಣ್ಣಾ ಹತ್ತರಕಿ, ಶಿವಾಜಿ ಬ್ರಿಗ್ರೇಡ್ ಅಧ್ಯಕ್ಷ ಗುರುಶಾಂತ ಟೆಂಗಳಿ, ಮಹೇಶ ಕೊರಳ್ಳಿ, ತುಕರಾಮ ಹೊನ್ನುರೆ, ಪ್ರದೀಪ ಘಾಳೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.