ADVERTISEMENT

ಆಳಂದ | ಮಳೆ ಹಾನಿ: ತುರ್ತು ಪರಿಹಾರ ಕಾರ್ಯಕ್ಕೆ ಸೂಚನೆ

ಆಳಂದ: ಮಳೆ ಹಾನಿ ಸ್ಥಳಕ್ಕೆ ಶಾಸಕ, ಅಧಿಕಾರಿಗಳ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:24 IST
Last Updated 13 ಜೂನ್ 2024, 15:24 IST
ಆಳಂದ ತಾಲ್ಲೂಕಿನ ಕಮಲಾನಗರ- ಬೆಳಮಗಿ ಗ್ರಾಮಗಳಿಗೆ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ ಹಾಳಾಗಿರುವುದು. ಶಾಸಕ ಬಸವರಾಜ ಮತ್ತಿಮಡು, ಸಹಾಯಕ ಆಯುಕ್ತೆ ಪಾರ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಆಳಂದ ತಾಲ್ಲೂಕಿನ ಕಮಲಾನಗರ- ಬೆಳಮಗಿ ಗ್ರಾಮಗಳಿಗೆ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ ಹಾಳಾಗಿರುವುದು. ಶಾಸಕ ಬಸವರಾಜ ಮತ್ತಿಮಡು, ಸಹಾಯಕ ಆಯುಕ್ತೆ ಪಾರ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು    

ಆಳಂದ: ‘ತಾಲ್ಲೂಕಿನ ನರೋಣಾ ಹೋಬಳಿ ವ್ಯಾಪ್ತಿಯಲ್ಲಿ ಅಧಿಕ ಮಳೆಗೆ ರೈತರ 12 ಜಾನುವಾರುಗಳು ಮೃತಪಟ್ಟಿವೆ. ವಿಶೇಷವಾಗಿ ಕೃಷಿ ಚಟುವಟಿಕೆಗೆ ನೆರವು ಆಗುವ ಎತ್ತುಗಳು ಸಹ ಸಾವನ್ನಪ್ಪಿವೆ. ಜಿಲ್ಲಾಧಿಕಾರಿಗಳು ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕು’ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.

ಗುರುವಾರ ಆಳಂದ ತಾಲ್ಲೂಕಿನ ಬೆಣ್ಣೆತೊರಾ ನದಿಪಾತ್ರದ ಕಮಲಾನಗರ, ಬೋಧನ, ಬೆಳಮಗಿ, ಲಾಡಮುಗುಳಿ, ಬೇಡಜೇವರ್ಗಿ, ವಿ.ಕೆ.ಸಲಗರ, ಕರಹರಿ ಗ್ರಾಮಗಳಿಗೆ ಸಹಾಯಕ ಆಯುಕ್ತರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಕಮಲಾನಗರ-ಬೋಧನ ಗ್ರಾಮದ ಮಧ್ಯದ ಸೇತುವೆಯೂ ಧಾರಾಕಾರ ಮಳೆಗೆ ಹಾನಿಯಾಗಿದೆ. ಮುಖ್ಯಸಂಪರ್ಕ ರಸ್ತೆಯಾಗಿದ್ದು, ಬಸವಕಲ್ಯಾಣ- ಕಲಬುರಗಿ ಪಟ್ಟಣಕ್ಕೆ ಸಂಪರ್ಕ ರಸ್ತೆ ಇದಾಗಿದ್ದು, ಅಧಿಕಾರಿಗಳು ತಕ್ಷಣ ಹಾನಿಯಾದ ರಸ್ತೆ, ಸೇತುವೆ ದುರಸ್ತಿ ಕಾಮಗಾರಿಗೆ ಎಚ್ಚರ ವಹಿಸಬೇಕು. ತಕ್ಷಣ ಮಳೆ ಹಾನಿಯ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದರು.

ADVERTISEMENT

ಸಹಾಯಕ ಆಯುಕ್ತೆ ಪಾರ್ವತಿ ಮಾತನಾಡಿ, ರಾತ್ರಿ ಸುರಿದ ಮಳೆಯಿಂದ ಜಾನುವಾರುಗಳ ಸಾವು ಹೆಚ್ಚಿದೆ. ರೈತರೂ ಹಳ್ಳದ ದಂಡೆ ಹಾಗೂ ಹೊಲಗದ್ದೆಗಳಲ್ಲಿ ಜಾನುವಾರು ಕಟ್ಟದೆ ಮನೆಗಳಲ್ಲಿ ಮತ್ತು ಮಳೆಯಿಂದ ರಕ್ಷಣೆ ಪಡೆಯುವ ಸುರಕ್ಷಿತ ಸ್ಥಳದಲ್ಲಿ ಜಾನುವಾರು ಕಟ್ಟಲು ತಿಳಿಸಿದರು.

ತಹಶೀಲ್ದಾರ್‌ ಪ್ರಕಾಶ ಹೊಸಮನಿ, ಕೃಷಿ ಇಲಾಖೆ ಅಧಿಕಾರಿ ಚಂದ್ರಕಾಂತ ಜೀವಣಗಿ, ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ, ಬಿಜೆಪಿ ಅಧ್ಯಕ್ಷ ಗಂಗಪ್ಪಗೌಡ ಬೋಧನ, ಹಣಮಂತರಾವ ಮಲಾಜಿ, ರಾಮು ಶೆಟಗಾರ, ಮಲ್ಲಿನಾಥ ಪಾಟೀಲ, ಸತೀಶ ಸುರುಡೆ, ಹಣಮಂತ ಬಿರಾದಾರ, ಸತೀಶ ಪೂಜಾರಿ, ಬಾಬುರಾವ ದಾಮಾ, ರಾಜುಗೌಡ ಪಾಟೀಲ, ವಿನಯ ಮಠಪತಿ ಉಪಸ್ಥಿತರಿದ್ದರು.

ಬೆಳಮಗಿ, ಕಮಲಾನಗರ ಗ್ರಾಮದಲ್ಲಿ ಮಳೆಗೆ ಜಾನುವಾರು ಕಳೆದುಕೊಂಡ ರೈತರ ಮನೆಗೆ ತೆರಳಿದ ಶಾಸಕರು ಪರಿಹಾರದ ಭರವಸೆ ನೀಡಿದರು. ಸುತ್ತಲಿನ ಗ್ರಾಮದ ರೈತರ ಹೊಲಗದ್ದೆಗಳು ಮಳೆಗೆ ಹಾಳಾದ ಕುರಿತು ಪರಿಶೀಲನೆ ಕೈಗೊಳ್ಳಲಾಯಿತು.

ಆಳಂದ ತಾಲ್ಲೂಕಿನ ಕಮಲಾನಗರ- ಬೆಳಮಗಿ ಗ್ರಾಮಗಳಿಗೆ ಶಾಸಕ ಬಸವರಾಜ ಮತ್ತಿಮಡು ಸಹಾಯಕ ಆಯುಕ್ತೆ ಪಾರ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.