ಕಲಬುರಗಿ: ‘ಕೋಟನೂರು (ಡಿ) ಗ್ರಾಮದ ಲುಂಬಿನಿ ಉದ್ಯಾನದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
‘ಮೂರು ತಿಂಗಳ ಹಿಂದೆ ನಡೆದಿದ್ದ ಘಟನೆಯನ್ನು ಚುನಾವಣೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಡುವುದಿಲ್ಲ. ಪುತ್ಥಳಿಗೆ ಅಪಮಾನ ಮಾಡಿದ್ದು ಯಾರು? ಏಕೆ ದುಷ್ಕೃತ್ಯ ಎಸಗಿದ್ದರು ಎಂಬುದು ತನಿಖೆಯಿಂದ ಬಯಲಾಗಲಿದೆ. ಅಂದು ನಡೆದಿದ್ದ ಗಲಾಟೆಯ ಬಗ್ಗೆಯೂ ತನಿಖೆಯಾಗಲಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಾಕ್ಷಿ, ಪುರಾವೆಗಳ ಕಲೆ ಹಾಕುವಲ್ಲಿ ಪೊಲೀಸ್ ತನಿಖಾ ಅಧಿಕಾರಿಗಳು ಎಡವಿ, ಸುಲಭವಾಗಿ ಜಾಮೀನು ಸಿಗುವಂತೆ ಮಾಡಿದ್ದು ಕಂಡುಬಂದರೆ, ಅವರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
‘ಹುಸಿ ಜಾತಿ ನಿಂದನೆ ಪ್ರಕರಣಗಳು ಕೇಳಿಬರುತ್ತಿವೆ. ದೂರು ದಾಖಲಿಸುವ ಮುನ್ನ ವಸ್ತುಸ್ಥಿತಿ ಪರಿಶೀಲಿಸುವಂತೆ ಅಧಿಕಾರಿಗಳಲ್ಲಿ ಸಂವೇದನೆ ಮೂಡಿಸುತ್ತೇವೆ. ಸುಳ್ಳು ಪ್ರಕರಣ ದಾಖಲಿಸುವವರನ್ನು ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.