ADVERTISEMENT

ವಾರ್ಡ್‌ ನಂ 23: ರಸ್ತೆಗಳದ್ದೇ ಸಮಸ್ಯೆ

ಮಳೆಗಾಲದಲ್ಲಿ ಹೆಚ್ಚುವ ಸಮಸ್ಯೆ: ಬೇಸಿಗೆಯಲ್ಲಿ ದೂಳಿನ ಕಾಟ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 4:41 IST
Last Updated 23 ಫೆಬ್ರುವರಿ 2024, 4:41 IST
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್‌ನ ಕೆಎಚ್‌ಬಿ ಕಾಲೊನಿಯಲ್ಲಿ ಮಣ್ಣಿನ ಅಡ್ಡ ರಸ್ತೆಯೊಂದರ ನೋಟ
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್‌ನ ಕೆಎಚ್‌ಬಿ ಕಾಲೊನಿಯಲ್ಲಿ ಮಣ್ಣಿನ ಅಡ್ಡ ರಸ್ತೆಯೊಂದರ ನೋಟ   

ಕಲಬುರಗಿ: ನಗರದ ಎಪಿಎಂಸಿ ಹಿಂಭಾಗದ ಫಿಲ್ಟರ್ ಬೆಡ್‌ ರಸ್ತೆ ಬಳಿಯ ಮಹಾನಗರ ಪಾಲಿಕೆ ವ್ಯಾಪ್ತಿಯ 23ನೇ ವಾಪ್ತಿಯ ಬಹುತೇಕ ಅಡ್ಡ ರಸ್ತೆಗಳಿಗೆ ಇನ್ನೂ ಸಿಮೆಂಟ್ ಅಥವಾ ಡಾಂಬರ್ ಹಾಕಿ ಅಭಿವೃದ್ಧಿ ಪಡಿಸಿಲ್ಲ. ಹೀಗಾಗಿ ನಿವಾಸಿಗಳು ಮಣ್ಣಿನ ರಸ್ತೆಯಲ್ಲೇ ಪ್ರಯಾಸ ಪಟ್ಟು ಸಂಚರಿಸುವಂತಾಗಿದೆ.

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳಡಿ ನಗರ ಬಹುತೇಕ ಬಡಾವಣೆಗಳಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಿದರೂ ನಮ್ಮ ಏರಿಯಾದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವುದು ಇಲ್ಲಿನ ನಿವಾಸಿಗಳ ಆಕ್ರೋಶ ಭರಿತ ಅಸಮಾಧಾನ.

‌‘ಮಣ್ಣಿನ ರಸ್ತೆಗಳು ಇರುವುದರಿಂದ ಮಳೆಗಾದಲ್ಲಿ ತೀವ್ರ ತೊಂದರೆ ಎದುರಿಸುವ ವಾರ್ಡ್‌ ನಿವಾಸಿಗಳು ಬೇಸಿಗೆ ಕಾಲದಲ್ಲಿ ದೂಳಿನ ಕಾಟದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಾರೆ. ಮಳೆಯಾದಾಗ, ಯಾವುದಾರೂ ಪೈಪ್‌ ಒಡೆದಾಗ ಮಣ್ಣಿನ ರಸ್ತೆ ಕೆಸರುಮಯವಾಗುದೆ, ಕಷ್ಟ ಪಟ್ಟು ಅಡ್ಡಾಡಬೇಕು. ಕಾರು, ಬೈಕ್‌ಗಳು ಕೊಂಚ ಎತ್ತರದ ರಸ್ತೆ ಹತ್ತಲು ಆಗದೆ ಚಕ್ರಗಳು ಅಲ್ಲೇ ತಿರುಗುತ್ತಾ ಒದ್ದಾಡುತ್ತವೆ. ಕೆಲವೊಮ್ಮೆ ಬೈಕ್‌ ಸ್ಕಿಡ್‌ ಆಗಿ ಬಿದ್ದು ಗಾಯಗೊಂಡ ಉದಾಹಣೆಗಳು ಇವೆ. ಮಕ್ಕಳು, ವೃದ್ಧರ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ’ ಎಂದು ನಿವಾಸಿಗಳು ವಿವರಿಸಿದರು.

ADVERTISEMENT

‌‘ಬೇಸಿಗೆಯಲ್ಲಿ ತೀವ್ರ ಬಿಸಿಲಿರುವುದರಿಂದ ಮಣ್ಣಿನಿಂದ ಏಳುವ ದೂಳು ಮನೆಗಳ ಒಳಗೆಲ್ಲ ವ್ಯಾಪಿಸುತ್ತದೆ. ವಾಹನಗಳನ್ನು ಒಂದೇ ಒಂದು ದಿನ ಮನೆ ಮುಂದೆ ನಿಲ್ಲಿಸಿದರೆ ದೂಳು ಮಯವಾಗುತ್ತವೆ. ಕೆಮ್ಮು ಸಹ ಸಾಮಾನ್ಯ ಎನ್ನುತಂತಾಗಿದ್ದು ರೋಗ ಬೀತಿ ಕಾಡುತ್ತಿದೆ‌‌’ ಎನ್ನುತ್ತಾರೆ ವಾರ್ಡ್‌ನಲ್ಲಿ ಮನೆಯಿರುವ ವ್ಯಾಪಾರಸ್ಥರೊಬ್ಬರು.

‌‘ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಸಲ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ, ಸದಸ್ಯರಿಗೆ ಮನವಿ ಮಾಡಿದ್ದೇವೆ. ಅವರಿಂದ ಯಾವುದೇ ಪ್ರಯೋಜವಾಗಿಲ್ಲ. ಮಳೆಗಾಲದಲ್ಲಂತೂ ಸಮಸ್ಯೆ ತೀವ್ರಗೊಳ್ಳುತ್ತದೆ’ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದರು.

ಉದ್ಯಾನಕ್ಕೆ ಕಲ್ಲು ಹಾಸು: ಸಾರ್ವಜನಿಕ ವಾಯು ವಿಹಾರ, ಮಕ್ಕಳ ಆಟಕ್ಕೆ ಅನುವಾಗಲು. ಸುಂದರ ವಾತಾವರಣ ನಿರ್ಮಾಣ ಮಾಡಲು ಉದ್ಯಾನದಲ್ಲಿ ಬಗೆಬಗೆಯ ಗಿಡಗಳನ್ನ ಬೆಳೆಸಿದರೆ ಮಹಾನಗರ ಪಾಲಿಕೆಯ 23ನೇ ವಾರ್ಡ್‌ ವ್ಯಾಪ್ತಿಯ ಉದ್ಯಾನಕ್ಕೆ ಕಲ್ಲು ಹಾಸು ಹಾಕಲಾಗಿದೆ. ಉದ್ಯಾನದ ಒಳಗೆ ಕುಳಿತುಕೊಳ್ಳಲು ಕಲ್ಲಿನ ಮೂರ್ನಾಲ್ಕು ಆಸನಗಳನ್ನು ಹೊರತು ಪಡಿಸಿದರೆ ಒಂದೇ ಒಂದು ಸಣ್ಣ ಗಿಡವೂ ಕಾಣುವುದಿಲ್ಲ. ಮಕ್ಕಳ ಆಟಿಕೆಗಳು ಇಲ್ಲ.

‌‘ನನ್ನ ಮೊಮ್ಮಗನನ್ನು ಒಂದು ದಿನ ಈ ಉದ್ಯಾನಕ್ಕೆ ಆಟವಾಡಲು ಕರೆದುಕೊಂಡು ಬಂದಿದ್ದೆ. ಅವನು ಓಡಾಡುತ್ತಾ ಬಿದ್ದಿದ್ದರಿಂದ ಮೊಣಗಾಲಿಗೆ ಗಾಯವಾಗಿದ್ದರಿಂದ ಮತ್ತೆ ಕರೆದುಕೊಂಡು ಬಂದಿಲ್ಲ. ನಗರದ ಬೇರೆ ಬಡವಣೆಗಳಲ್ಲಿ ಇರುವಂತೆ ನಮ್ಮ ವಾರ್ಡ್‌ನ ಉದ್ಯಾನವನ್ನೂ ಅಭಿವೃದ್ಧಿ ಮಾಡಬೇಕು’ ಎನ್ನುತ್ತಾರೆ ವೃದ್ಧೆಯೊಬ್ಬರು.

ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್‌ನ ಕೆಎಚ್‌ಬಿಯ ಉದ್ಯಾನ ಗಿಡಗಳಿಲ್ಲದೆ ಭಣಗುಟ್ಟುತ್ತಿರುವುದು
ಪ್ರಕಾಶ ವ್ಯಾಪಾರಿ

ಕಳ್ಳತನದ ಸಮಸ್ಯೆ ವಿಪರೀತವಾಗಿದೆ. ರಾತ್ರಿ ವೇಳೆ ಪೊಲೀಸ್‌ ಬೀಟ್‌ ವ್ಯವಸ್ಥೆ ಹೆಚ್ಚಿಸಬೇಕು

-ಪ್ರಕಾಶ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.