ಅಫಜಲಪುರ: ಬತ್ತಿಹೋಗಿರುವ ಭೀಮಾ ನದಿಗೆ ನೀರು ಹರಿಸಲು ಮಾ.26ರಂದು ಸರ್ಕಾರದಿಂದ ಆದೇಶ ಬರಲಿದೆ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದ್ದಾರೆ.
ಸೋಮವಾರ ಸಂಜೆ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಅವರು, ‘ಬರಿದಾಗಿರುವ ಭೀಮಾ ನದಿಗೆ ನಾರಾಯಣಪುರ ಜಲಾಶಯದ ಐಬಿಸಿ ಮೂಲಕ 1.5 ಟಿಎಂಸಿ ನೀರು ಹರಿಸಿ ಜನ, ಜಾನುವಾರುಗಳ ಜೀವ ಉಳಿಸಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ನಾನು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಉಪಮುಖ್ಯಮಂತ್ರಿಗಳು 1 ಟಿಎಂಸಿ ನೀರು ಹರಿಸುವುದಾಗಿ ತಿಳಿಸಿದ್ದಾರೆ. ಮಂಗಳವಾರ ಸರ್ಕಾರದಿಂದ ಆದೇಶವಾಗುತ್ತದೆ’ ಎಂದು ತಿಳಿಸಿದರು.
‘ಮಹಾರಾಷ್ಟ್ರದ ಉಜಿನಿ ಜಲಾಶಯದಿಂದ ಈಗಾಗಲೇ ಶೇಷಗಿರಿ ವಾಡಿವರೆಗೆ ಭೀಮಾ ನದಿಗೆ ನೀರು ಬಂದಿದೆ. ಅದಕ್ಕಾಗಿ ಇನ್ನೂ ಎರಡು ದಿನ ಉಜನಿ ಜಲಾಶಯದ ಗೇಟು ಮುಚ್ಚದಂತೆ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. ಇದೆಲ್ಲವೂ ಸೇರಿದರೆ ನಾವು ಬೇಸಿಗೆಯನ್ನು ದಾಟಬಹುದು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.