ADVERTISEMENT

ಬಿಲ್ ಪಾವತಿ ಗಲಾಟೆ: ಜಸ್ಟ್ ಕ್ಲಬ್ ರಿಸೆಪ್ಷನಿಸ್ಟ್ ಮೇಲೆ ಹಲ್ಲೆ ಮಾಡಿದ ವೈದ್ಯರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 4:10 IST
Last Updated 27 ಆಗಸ್ಟ್ 2024, 4:10 IST

ಕಲಬುರಗಿ: ನಗರದಲ್ಲಿ ಈಚೆಗೆ ನಡೆದ ಭಾರತೀಯ ಮನೋವೈದ್ಯರ ಸಂಘದ ರಾಜ್ಯ ಘಟಕದ ವಾರ್ಷಿಕ ಸಮ್ಮೇಳನಕ್ಕೆ ಬಂದಿದ್ದ ಅತಿಥಿಗಳು ತಂಗಿದ್ದ ರೆಸಾರ್ಟ್‌ನ ಬಿಲ್ ಪಾವತಿ ಸಂಬಂಧ ರಿಸೆಪ್ಷನಿಸ್ಟ್ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಇಬ್ಬರು ವೈದ್ಯರ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ರಾಹುಲ್ ಮಂದಾಕನಳ್ಳಿ ಹಾಗೂ ಸಂಘಟನಾ ಖಜಾಂಚಿ ಡಾ.ಅಜಯ್ ಢಗೆ ಹಲ್ಲೆ ಮಾಡಿದ ಆರೋಪಿಗಳು. ರೆಸಾರ್ಟ್ ರಿಸೆಪ್ಷನಿಸ್ಟ್ ಆದರ್ಶ ಮನ್‌ಬಹಾದ್ದೂರ್ ಹಲ್ಲೆಗೆ ಒಳಗಾದವರು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ದಿನಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗಾಗಿ ಇಬ್ಬರು ಆರೋಪಿಗಳು ಜಸ್ಟ್‌ ಕ್ಲಬ್ ಹೋಟೆಲ್ ಅಂಡ್ ರೆಸಾರ್ಟ್‌ನಲ್ಲಿ 20 ಕೊಠಡಿಗಳನ್ನು ₹ 50 ಸಾವಿರ ಮುಂಗಡ ಕೊಟ್ಟು ಕಾಯ್ದಿರಿಸಿದ್ದರು. ಆಗಸ್ಟ್‌ 24ರಂದು ಅತಿಥಿಗಳು ರೂಂ ಖಾಲಿ ಮಾಡುವುದರಿಂದ ಉಳಿದ ಬಾಡಿಗೆ ಹಣ ಪಾವತಿಸುವಂತೆ ಆದರ್ಶ ಅವರು ಇಬ್ಬರು ವೈದ್ಯರಿಗೆ ಹೇಳಿದರು. ರಾತ್ರಿ ಬಂದು ಕೊಡುವುದಾಗಿ ಭರವಸೆ ನೀಡಿದರು ಎಂದು ಹೇಳಿದ್ದಾರೆ.

ADVERTISEMENT

ಆ.25ರ ಬೆಳಿಗ್ಗೆ 3.40ರ ಸುಮಾರಿಗೆ ಕುಡಿದ ನಶೆಯಲ್ಲಿ ವೈದ್ಯರಾದ ರಾಹುಲ್ ಹಾಗೂ ಅಜಯ್ ಅವರು ರಿಸೆಪ್ಷನ್‌ ಕೌಂಟರ್ ಒಳಗೆ ಬಂದು, ಆದರ್ಶ ಅವರ ಎದೆ ಅಂಗಿ ಹಿಡಿದು ಹಲ್ಲೆ ಮಾಡಿದ್ದಾರೆ. ಅವಾಚ್ಯ ಪದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಸೆಕ್ಯುರಿಟಿ ಗಾರ್ಡ್ ಮತ್ತು ರೆಸಾರ್ಟ್ ಸಿಬ್ಬಂದಿ ಬಂದು ಆದರ್ಶನನ್ನು ಕರೆದೊಯ್ದಿದ್ದಾರೆ. ಆದರ್ಶ ನೀಡಿದ ದೂರಿನ ಅನ್ವಯ ಆರೋಗಳ ಮೇಲೆ ಬಿಎನ್‌ಎಸ್‌ ಕಲಂ 126(2), 115 (2), 352, 351 (2) (3) ಜತೆಗೆ 3 (5) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಾವಿಗೆ ಹಾರಿ ಆತ್ಮಹತ್ಯೆ: ಮಕ್ಕಳು ಆಶ್ರಯ ನೀಡುತ್ತಿಲ್ಲವೆಂದು ಮನನೊಂದು ಲಂಗರ ಹನುಮಾನ ನಗರದ ನಿವಾಸಿ ಹಣಮಂತ ತೆಗನೂರ (65) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಬ್‌-ಅರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತರಕಾರಿ ವ್ಯಾಪಾರ ಮಾಡುತ್ತಿದ್ದ ಹಣಮಂತ ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಒಬ್ಬರು ಪುತ್ರಿ ಇದ್ದರು. ಕುಡಿತದ ದಾಸನಾಗಿದ್ದು, ಮದ್ಯದ ನಶೆಯಲ್ಲಿ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ನೋಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಯಾರಿಗೂ ಹೇಳದೆ ಮನೆಯಿಂದ ಹೊರ ಹೋಗಿ ಲಂಗರ ಹನುಮಾನ ಪ್ರದೇಶದಲ್ಲಿನ ಬಾವಿಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.