ADVERTISEMENT

ಜಾಧವ ಪರ ಬಂಜಾರ ಸಮುದಾಯದ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 6:16 IST
Last Updated 5 ಏಪ್ರಿಲ್ 2024, 6:16 IST
ಕಲಬುರಗಿಯಲ್ಲಿ ಗುರುವಾರ ಸಂಸದ ಡಾ.ಉಮೇಶ ಜಾಧವ ಅವರ ಮನೆಯಲ್ಲಿ ನಡೆದ ಬಂಜಾರ ಸಮುದಾಯದ ಮುಖಂಡರ ಸಭೆ
ಕಲಬುರಗಿಯಲ್ಲಿ ಗುರುವಾರ ಸಂಸದ ಡಾ.ಉಮೇಶ ಜಾಧವ ಅವರ ಮನೆಯಲ್ಲಿ ನಡೆದ ಬಂಜಾರ ಸಮುದಾಯದ ಮುಖಂಡರ ಸಭೆ   

ಕಲಬುರಗಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಂಸದ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರ ನಿವಾಸದಲ್ಲಿ ಗುರುವಾರ ಬಂಜಾರ ಸಮುದಾಯದ ಕೆಲ ಮುಖಂಡರ ಸಭೆ ನಡೆಸಿದರು. ಸಭೆಯಲ್ಲಿ ಜಾಧವ ಅವರ ಕೈ ಬಲಪಡಿಸುವುದಾಗಿ ಭರವಸೆ ನೀಡಿದ ಮುಖಂಡರು, ಈ ಬಗ್ಗೆ ಸಮುದಾಯದವರಿಗೂ ಮನವಿ ಮಾಡಿದರು.

ನಗರ ಸೇರಿದಂತೆ ವಿವಿಧ ತಾಲ್ಲೂಕುಗಳ ಬಂಜಾರ ಸಮುದಾಯದ ಮುಖಂಡರಾದ ಪೋಮು ರಾಠೋಡ್, ಶ್ರೀಧರ ಚವ್ಹಾಣ್, ಚಂದ್ರಶೇಖರ ರಾಠೋಡ್, ಬಿ.ಬಿ. ನಾಯಕ್, ಕಮಲಾಕರ ರಾಠೋಡ್, ಸುಶೀಲಾಬಾಯಿ ರಾಠೋಡ್, ಶಾರದಾ ಬಾಯಿ ಯಾಕಾಪೂರ, ಸುರೇಶ್ ರಾಠೋಡ್, ಶಿವು ಸೈನಿಕ್ ರಾಠೋಡ್, ಕೃಷ್ಣ ನಾಯಕ್, ಕಿಶನ್ ನಾಯಕ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

‘ಬಿಜೆಪಿಯ ವರಿಷ್ಠರು, ಪ್ರಧಾನಿ ನರೇಂದ್ರ ಮೋದಿ ಅವರು ಸಮುದಾಯದ ನಾಯಕರೊಬ್ಬರಿಗೆ ಸಂಸತ್ತಿಗೆ ಪ್ರವೇಶ ಮಾಡುವಂತಹ ಅವಕಾಶ ನೀಡಿದ್ದಾರೆ. ಅದರಿಂದಾಗಿ ಜಾಧವ ಅವರು ಐದು ವರ್ಷ ಸಂಸತ್ತಿನಲ್ಲಿ ಇದ್ದುಕೊಂಡು ಮೋದಿ ಅವರ ಜತೆಗೆ ದೇಶ ಸೇವೆ ಮಾಡಿದರು. ಇದು ಸಮುದಾಯಕ್ಕೆ ಹೆಮ್ಮೆಯ ಸಂಗತಿ’ ಎಂದು ಮುಖಂಡರು ಹೇಳಿದರು.

ADVERTISEMENT

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ‘ಬಂಜಾರ ಸಮುದಾಯಕ್ಕೆ ಬಿಜೆಪಿ ಮಾತ್ರ ಉತ್ತಮ ಅವಕಾಶಗಳನ್ನು ನೀಡಿದೆ. ಆದರೆ, ಕಾಂಗ್ರೆಸ್ ನಾಯಕರು ಯಾವುದೇ ಸ್ಥಾನ–ಮಾನ ಕೊಡದೆ ಓಟಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಈ ಹಿಂದೆ ಎರಡು ಬಾರಿ ರೇವು ನಾಯಕ ಬೆಳಮಗಿ ಅವರಿಗೆ ಬಿಜೆಪಿ ಅವಕಾಶ ನೀಡಿತ್ತು. ಆದರೆ, ಸ್ವಯಂಕೃತ ಅಪರಾಧದಿಂದಾಗಿ ಅವರು ಪಕ್ಷ ಬಿಟ್ಟು ದುಃಸ್ಥಿತಿಗೆ ಮರಳಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.