ADVERTISEMENT

ಬಿಜೆಪಿ ಶಿಸ್ತು ಬದ್ಧವಾದ ಪಕ್ಷ: ಮಾಲೀಕಯ್ಯ ಗುತ್ತೇದಾರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 16:10 IST
Last Updated 1 ಡಿಸೆಂಬರ್ 2023, 16:10 IST
ಕಲಬುರಗಿಯಲ್ಲಿ ಶುಕ್ರವಾರ ನಡೆದ ಪ್ರಶಿಕ್ಷಣ ವರ್ಗ ಕಾರ್ಯಾಗಾರವನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಉದ್ಘಾಟಿಸಿದರು. ಪಕ್ಷದ ಮುಖಂಡರು ಇದ್ದರು
ಕಲಬುರಗಿಯಲ್ಲಿ ಶುಕ್ರವಾರ ನಡೆದ ಪ್ರಶಿಕ್ಷಣ ವರ್ಗ ಕಾರ್ಯಾಗಾರವನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಉದ್ಘಾಟಿಸಿದರು. ಪಕ್ಷದ ಮುಖಂಡರು ಇದ್ದರು   

ಕಲಬುರಗಿ: ‘ಬಿಜೆಪಿಯು ಶಿಸ್ತು ಬದ್ಧ ಸಂಘಟನೆ ಹೊಂದಿದ್ದು ಎಲ್ಲೆಡೆ ಬಲಿಷ್ಠವಾಗಿ ಬೆಳೆದಿದೆ. ತಳಮಟ್ಟದಲ್ಲಿ ಪಕ್ಷವನ್ನು ಕಟ್ಟುವಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರು ಪ್ರಮುಖಪಾತ್ರವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪಟ್ಟಣ ಪಂಚಾಯಿತಿ, ಪುರಸಭೆಯ ಬಿಜೆಪಿ ಸದಸ್ಯರ ಪ್ರಶಿಕ್ಷಣ ವರ್ಗ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ವರ್ಷ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ಮಾಡಿದ್ದಾರೆ. ಹೀಗಾಗಿ, ಭಾರತ ವಿಶ್ವಗುರುವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು’ ಎಂದರು.

ADVERTISEMENT

‘ಮೋದಿ ಅವರಂತ ನಾಯಕ ನಮಗೆ ವರವಾಗಿ ಲಭಿಸಿದೆ. ಅವರ ನೇತೃತ್ವದ ಆಡಳಿತದಿಂದಾಗಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

‘ಈ ಹಿಂದಿನ ಚುನಾವಣೆಯಲ್ಲಿ ಹಲವು ಗೊಂದಲ, ವೈಫಲ್ಯಗಳಿಂದಾಗಿ ಸೋಲು ಅನುಭವಿಸಬೇಕಾಯಿತು. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆ ಜಾರಿಗೆ ತಂದು ರಾಜ್ಯವನ್ನು ಆರ್ಥಿಕ ದಿವಾಳಿ ತಳ್ಳಿದೆ. ಶಾಸಕರು ಅನುದಾನ ಇಲ್ಲದೆ ಜನರ ಮುಂದೆ ಹೋಗಲು ಹಿಂದೆ–ಮುಂದೆ ನೋಡುತ್ತಿದ್ದಾರೆ’ ಎಂದರು.

ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ‘ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿ ಕೆಲಸ ಮಾಡುತ್ತಿದ್ದು, ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದಿದೆ. ಪ್ರಶಿಕ್ಷಣ ವರ್ಗಗಳು ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತವೆ. ಮೋದಿ ಅವರು ಸಂಸದರ ಒಂದೊಂದು ತಂಡದ ಸಭೆ ನಡೆಸಿ, ಕ್ಯಾಬಿನೆಟ್ ದರ್ಜೆ ಸಚಿವರನ್ನು ಎದುರು ಕೂಡಿಸಿಕೊಂಡು ತರಬೇತಿ ನೀಡುತ್ತಾರೆ. ಇಂತಹ ಪ್ರಕ್ರಿಯೆಗಳು ಮಾಹಿತಿ ವಿನಿಮಯಕ್ಕೆ ಪೂರಕವಾಗಿವೆ’ ಎಂದು ಹೇಳಿದರು.

‘ಸಾಮಾಜಿಕ ಜಾಲತಾಣ, ಮಾಧ್ಯಮ ನಿರ್ವಹಣೆ ಹಾಗೂ ಪಕ್ಷದ ಸಿದ್ಧಾಂತ ಮತ್ತು ಇತಿಹಾಸ ಅರಿಯುವ ಪ್ರಶಿಕ್ಷಣ ವರ್ಗಗಳು ಜ್ಞಾನ ನೀಡುತ್ತವೆ. ಬಿಜೆಪಿ ಸಂಘಟನೆಯ ವಿಭಿನ್ನವಾಗಿ ಕೆಲಸ ಮಾಡುತ್ತಿದೆ’ ಎಂದರು.

ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಥಿಕ ತಜ್ಞ ವಿಶ್ವೇಶ್ವರ ಭಟ್, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ಮುಖಂಡರಾದ ಅಮರನಾಥ ಪಾಟೀಲ, ಸಿದ್ದರಾಮಣ್ಣ, ಶಶಿಕಲಾ ಟೆಂಗಳಿ, ಅವಿನಾಶ ಕುಲಕರ್ಣಿ, ಶಿವಯೋಗಿ ನಾಗನಹಳ್ಳಿ, ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ ಇದ್ದರು.

‘ಖರ್ಗೆ ತವರಲ್ಲಿ ಬಿಜೆಪಿ ಬಲಿಷ್ಠ’

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾದ ಕಲಬುರಗಿಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು ಮತ್ತಷ್ಟು ಸಂಘಟನೆಗೆ ಆದ್ಯತೆ ಕೊಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು’ ಎಂದು ಮಾಲೀಕಯ್ಯ ಗುತ್ತೇದಾರ ಹೇಳಿದರು. ‘ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು. ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಲೋಕಸಭೆ ಚುನಾವಣೆಗೆ ಸಿದ್ಧರಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.