ADVERTISEMENT

ಹೊಸ ಕೆರೆ ನಿರ್ಮಾಣಕ್ಕೆ ₹200 ಕೋಟಿ ಪ್ರಸ್ತಾವ

ಕೊತ್ತನ ಹಿಪ್ಪರ್ಗಾ, ಮುನ್ನೋಳ್ಳಿ, ಕಿಣಿಸುಲ್ತಾನ ಕೆರೆಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:59 IST
Last Updated 17 ಜೂನ್ 2024, 15:59 IST
ಆಳಂದ ತಾಲ್ಲೂಕಿನ ಕೊತ್ತನ ಹಿಪ್ಪರಗಾ ಗ್ರಾಮದ ಕೆರೆಗೆ ಶಾಸಕ ಬಿ.ಆರ್.ಪಾಟೀಲ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ದಿಲೀಪ ಕ್ಷೀರಸಾಗರ
ಆಳಂದ ತಾಲ್ಲೂಕಿನ ಕೊತ್ತನ ಹಿಪ್ಪರಗಾ ಗ್ರಾಮದ ಕೆರೆಗೆ ಶಾಸಕ ಬಿ.ಆರ್.ಪಾಟೀಲ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ದಿಲೀಪ ಕ್ಷೀರಸಾಗರ   

ಆಳಂದ: ತಾಲ್ಲೂಕಿನಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕೆ ₹ 200 ಕೋಟಿ ಪ್ರಸ್ತಾವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ತಿಳಿಸಿದರು.

ತಾಲ್ಲೂಕಿನ ಕೊತ್ತನ ಹಿಪ್ಪರ್ಗಾ ಗ್ರಾಮದ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದರು.

‘ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲ ಕೆರೆಗಳು ಭರ್ತಿಯಾಗಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ. ಸಿರಪುರ ಮಾದರಿ ಜಲಸಂಗ್ರಹ ಕಾಮಗಾರಿಯು ಯಶಸ್ವಿಯಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದು ಹೇಳಿದರು.

ADVERTISEMENT

ಜಿಲ್ಲೆಗೆ 185 ಕೋಟಿ ಬೆಳೆ ವಿಮೆ ಬಂದಿದೆ. ಒಟ್ಟು ಜಿಲ್ಲೆಯಲ್ಲಿ ಆಳಂದ ತಾಲ್ಲೂಕಿಗೆ ಅಧಿಕ ಒಟ್ಟು 82 ಕೋಟಿ ಬೆಳೆ ವಿಮೆ ಬಂದಿದ್ದು, ಅಧಿಕಾರಿಗಳ ಬೆನ್ನು ಬಿದ್ದು ಸಮೀಕ್ಷೆ ನಡೆಸಿದ ಪರಿಣಾಮ ಹೆಚ್ಚಿನ ಲಾಭ ನಮ್ಮ ರೈತರಿಗೆ ಆಗಿದೆ’ ಎಂದು ಹೇಳಿದರು.

‘ಅಮರ್ಜಾ ಅಣೆಕಟ್ಟೆಗೆ ಭೀಮಾ ನದಿಯ ಹೆಚ್ಚುವರಿ ನೀರು ಭರ್ತಿ, ಸಿರಪುರ ಮಾದರಿ ಜಲಸಂಗ್ರಹ ಕಾಮಗಾರಿ ವಿಸ್ತಾರ ಹಾಗೂ ಹೊಸ ಕೆರೆ ನಿರ್ಮಾಣವು ಮುಂಬರುವ ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಇದರಿಂದ ತಾಲ್ಲೂಕಿನ ಶಾಶ್ವತ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಹೇಳಿದರು.

ಮುಖಂಡ ಡಿ.ಎನ್. ವಸಂತಕುಮಾರ, ಅನೀಲ ರಾಜೋಳೆ, ಶಿವಪೂಜಪ್ಪ ಬಿರಾದಾರ, ಸಂಜುಕುಮಾರ ಕೋಬ್ರೆ, ಚನ್ನವೀರ ಕಾಳಕಿಂಗೆ, ನಂದಕಿಶೋರ ಬುಜರ್ಕೆ, ದಿಲೀಪ ಕ್ಷೀರಸಾಗರ, ಭಾರತ ಪಾಟೀಲ, ಸಿದ್ರಾಮಪ್ಪ ಜಿಡಗಾ, ಗುರುನಾಥ ಪಾಟೀಲ, ನಾಗೇಂದ್ರ ತಾಂಬೆ, ಸುನೀಲ ಚವ್ಹಾಣ, ಅಣ್ಣಪ್ಪ ನಿರಗುಡಿ , ಸಿದ್ರಾಮಪ್ಪ ದೇಸಾಯಿ ಉಪಸ್ಥಿತರಿದ್ದರು.

ಮುನ್ನೋಳ್ಳಿ, ಕಿಣಿಸುಲ್ತಾನ ಗ್ರಾಮದ ಕೆರೆಗೂ ತೆರಳಿ ತುಂಬಿದ ಕೆರೆಗೆ ಬಾಗಿನ ಅರ್ಪಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.