ವಾಡಿ (ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ರಾವೂರು ಗ್ರಾಮದಲ್ಲಿ ಗುರುವಾರ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಹತ್ತಿರದ ಕಲ್ಲುಗಣಿಯ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾವೂರು ಗ್ರಾಮದ ರವಿ ಗುತ್ತೇದಾರ ಅವರ ಪುತ್ರ ಭುವನ್ (5) ಹಾಗೂ ಅಶೋಕ ಬೆಟಗೇರಿ ಅವರ ಪುತ್ರ ದೇವು (6) ಮೃತರು.
ಗ್ರಾಮದ ವಿವೇಕಾನಂದ ಶಿಶುವಿಹಾರ ಶಾಲೆಯಲ್ಲಿ ಓದುತ್ತಿದ್ದ ಭುವನ್ ಹಾಗೂ ದೇವು ಬೆಳಿಗ್ಗೆ ಆಟವಾಡಲು ಹೋಗಿದ್ದರು. ಬಹಳ ಹೊತ್ತಾದರೂ ಬಾರದಿದ್ದಾಗ ಸಂಬಂಧಿಕರು ಹುಡುಕಾಡಿದ್ದಾರೆ. ಒಬ್ಬ ಬಾಲಕನ ಬಟ್ಟೆ ಹಾಗೂ ಆಟವಾಡಲು ಬಳಸುತ್ತಿದ್ದ ಟೈರ್ ಗಾಲಿಯು ಕಲ್ಲುಗಣಿಯ ಪಕ್ಕದಲ್ಲಿ ಕಾಣಿಸಿಕೊಂಡಿದೆ. ಅನುಮಾನಗೊಂಡು ಹೊಂಡದಲ್ಲಿ ಹುಡುಕಿದಾಗ ಇಬ್ಬರ ಬಾಲಕರ ಶವಗಳು ಪತ್ತೆಯಾಗಿವೆ.
ಈಜಾಡಲು ತೆರಳಿರಬಹುದು ಅಥವಾ ಕಾಲು ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ವಾಡಿ ಪಿಎಸ್ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪುಟ್ಟ ಮಕ್ಕಳನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.