ಚಿಂಚೋಳಿ: ತೆಲಂಗಾಣ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ 48 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಕುಂಚಾವರಂ ಠಾಣೆಗೆ ದೂರು ಸಲ್ಲಿಸಲಾಗಿದೆ.
ಬೊಲೆರೋ ವಾಹನ ಚಾಲಕ ಗೋಪಾಲ ಪವಾರ(48) ಮೃತವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಹೊಲಕ್ಕೆ ಹೋದಾಗ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ. ದೇಹದಲ್ಲಿ ಗಾಯಗಳಿವೆ ಎಂದು ಹೇಳಲಾಗಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡು ಬಂದಿದೆ. ನೇಣಿನ ಹಗ್ಗ ಕಡಿದು ಶವ ಮರದಿಂದ ಕೆಳಗೆ ಹೊಲದಲ್ಲಿ ಬಿದ್ದಿದ್ದು ಅನುಮಾನಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಕುಂಚಾವರಂ ಪೊಲೀಸರು ಹಾಗೂ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇದು ಕೊಲೆಯೋ ಅಥವಾ ಆತ್ಮಹತ್ಯೆ ಎಂಬ ಬಗ್ಗೆ ಖಚಿತವಾಗಿಲ್ಲ ಹೀಗಾಗಿ ತಜ್ಞರು ಬಂದು ಪರಿಶೀಲಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಲಬುರಗಿಗೆ ಕಳುಹಿಸಲಾಗಿದೆ.
ಅಣ್ಣ ಮಗನ ಸಾವು: ಕೊಲೆಯಾದ ಗೋಪಾಲ ಪವಾರ್ ಅವರ ಅಣ್ಣನ ಮಗ ಪರಶುರಾಮ ಪವಾರ (27) ಮದ್ಯಸೇವಿಸಿ ಮನೆಯ ಬಳಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಇದರಿಂದ ಒಂದೇ ಮನೆಯಲ್ಲಿ ಇಬ್ಬರು ಮೃತಪಟ್ಟಂತಾಗಿದೆ. ಗೋಪಾಲ ಅವರ ಶವ ಮರಣೋತ್ತರ ಪರೀಕ್ಷೆಗೆ ಕಲಬುರಗಿಗೆ ಕಳುಹಿಸಿದ್ದು ಇನ್ನು ತಾಂಡಾಕ್ಕೆ ತಂದಿಲ್ಲ ಹೀಗಿರುವಾಗ ಅವರ ಮನೆಯಲ್ಲಿಯೇ ಪರಶುರಾಮ ಸಾವಿಗೀಡಾಗಿದ್ದರಿಂದ ಅವರ ಅಂತ್ಯಕ್ರಿಯೆ ನಡೆಸಿದ್ದಾರೆ. ಪರಶುರಾಮ ಸಾವಿನ ಕುರಿತು ಠಾಣೆಗೆ ದೂರು ಬಂದಿಲ್ಲ ಎಂದು ಕುಂಚಾವರಂ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪರಶುರಾಮನಿಗೆ ಪತ್ನಿ ಹಾಗೂ ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.