ಚಿಂಚೋಳಿ: ‘ರಾಜ್ಯ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.
ಇಲ್ಲಿನ ಪುರಸಭೆ ಆವರಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಮಾತನಾಡಿ, ‘ಪುರುಷರಿಗೆ ಸರ್ಕಾರ ಹಣ ನೀಡಿದರೆ ಕುಟುಂಬಕ್ಕೆ ನೆರವಾಗುವುದು ವಿರಳ ಎಂದು ಮಹಿಳೆಯರಿಗೆ ಹಣ ನೀಡುತ್ತಿದೆ. ಸಾಲ ಮಾಡಬೇಡಿ ಇದು ನಿಮಗೆ ಹೊರೆಯಾಗುತ್ತದೆ. ಸರ್ಕಾರ ನೀಡುತ್ತಿರುವ ಹಣ ಮನೆಗೆ ಖರ್ಚು ಮಾಡಿ ಉಳಿದರೆ ಜೀವವಿಮೆ ಮಾಡಿಸಿಕೊಳ್ಳಿ’ ಎಂದು ಹೇಳಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಂಕರ ರಾಠೋಡ್, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಘಟಕ ವ್ಯವಸ್ಥಾಪಕ ವಿಠಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ, ಶಿವಾನಂದ ಸ್ವಾಮಿ ಕಪೂರ, ಯೋಜನೆಯಿಂದ ಆಗಿರುವ ಉಪಯೋಗಗಳ ಕುರಿತು ನರಸಮ್ಮ ಆವುಂಟಿ, ಜ್ಯೋತಿ ನಾಗರೆಡ್ಡಿ, ಲಕ್ಷ್ಮಿ ಪ್ರಭಾಕರರಡ್ಡಿ ಮಾತನಾಡಿದರು.
ಜೆಸ್ಕಾಂ ಎಇಇ ಸುರೇಶ ಶರ್ಮಾ, ಪುರಸಭೆಯ ಪರಿಸರ ಎಂಜಿನಿಯರ್ ಸಂಗಮೇಶ, ದೇವೇಂದ್ರಪ್ಪ, ಕಂದಾಯ ಅಧಿಕಾರಿ ನಿಂಗಮ್ಮ ಬಿರಾದಾರ, ಕಂದಾಯ ನಿರೀಕ್ಷಕಿ ಸವಿತಾ, ನೈರ್ಮಲ್ಯ ನಿರೀಕ್ಷಕ ಆನಂದ ಕಟ್ಟಿ, ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ಉಪಸ್ಥಿತರಿದ್ದರು.
ವೇದಿಕೆ ಕೆಳಗೆ ಪುರಸಭೆ ಸದಸ್ಯರು: ಪುರಸಭೆಯ ಸದಸ್ಯರು ಫಲಾನುಭವಿಗಳ ಜತೆ ವೇದಿಕೆಯ ಎದುರಿಗೆ ಕುಳಿತಿದ್ದು ಗೋಚರಿಸಿತು. ತಹಶೀಲ್ದಾರ್ ಮಾತನಾಡುವಾಗ ಯುವನಿಧಿಯನ್ನು ವಿದ್ಯಾನಿಧಿ ಎಂದು ಚಿಂತನ್ ರಾಠೋಡ್ ಅವರನ್ನು ಚೇತನ ರಾಠೋಡ್ ಎಂದು ಹೇಳಿದ್ದು ಕೇಳಿಸಿತು. ಸಮಾವೇಶದ ಬಳಿಕ ಮಹಿಳೆಯರು ಊಟಕ್ಕೆ ಮುಗಿಬಿದ್ದಿದ್ದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕೆಲವು ಮಹಿಳೆಯರು ಮದ್ಯಮಾರಾಟ ನಿಷೇಧಿಸುವಂತೆ ಒತ್ತಾಯಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗಿರುವ ತೊಡಕುಗಳ ನಿವಾರಣೆಗೆ ಐದು ಕೌಂಟರ್ ತೆರೆದು 255 ಅರ್ಜಿ ಸ್ವೀಕರಿಸಲಾಗಿದೆ. 40 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗಿದೆ
-ಕಾಶಿನಾಥ ಧನ್ನಿ ಮುಖ್ಯಾಧಿಕಾರಿ ಪುರಸಭೆ ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.