ADVERTISEMENT

ಬಿಜೆಪಿ, ಜೆಡಿಎಸ್‌ನವರಿಗೆ ತಕ್ಕ ಪಾಠ ಕಲಿಸಿ: ಸಿಎಂ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 16:29 IST
Last Updated 16 ಸೆಪ್ಟೆಂಬರ್ 2024, 16:29 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಕಲಬುರಗಿ: ‘ಕುಮಾರಸ್ವಾಮಿ, ಅಶೋಕ, ಯಡಿಯೂರಪ್ಪ, ವಿಜಯೇಂದ್ರನಂತವರು ನನ್ನನ್ನು ರಾಜಕೀಯವಾಗಿ ಮುಗಿಸುತ್ತೇವೆ ಎಂದುಕೊಂಡಿದ್ದರೆ ಅದು ಅವರ ಮೂರ್ಖತನ. ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ನನ್ನ ಮೇಲೆ ಗೂಬೆ ಕೂಡಿಸಲು ಯತ್ನಿಸುತ್ತಿರುವವರಿಗೆ ತಕ್ಕ ‍ಪಾಠ ಕಲಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ‌ ಕವಲಗಿ (ಕೆ) ಗ್ರಾಮದಲ್ಲಿ ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಉದ್ಘಾಟನೆ ಹಾಗೂ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿಮ್ಮ ತೆರಿಗೆಯ ದುಡ್ಡನ್ನು ನಿಮಗೆ ಕೊಡುತ್ತಿದ್ದರೆ ವಿರೋಧಿಗಳಿಗೆ ಹೊಟ್ಟೆ ಉರಿಯುತ್ತಿದೆ. ನಾನು ಗ್ಯಾರಂಟಿ ಕೊಡಲು ಆರಂಭ ಮಾಡಿದ ಮೇಲೆ ಹೇಗಾದರೂ ಮಾಡಿ ನನ್ನನ್ನು ಮುಗಿಸಲು ತೀರ್ಮಾನಿಸಿದ್ದಾರೆ. ನೀವು ನನ್ನನ್ನು ಮುಗಿಸಲು ಬಿಡಕೂಡದು. ಐದು ಗ್ಯಾರಂಟಿ ಬೇಕು ಎನ್ನುವುದಾದರೆ ಸಮಾಜ ಒಡೆಯುವ, ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ದಯಮಾಡಿ ಎಚ್ಚರದಿಂದ ಇರಿ’ ಎಂದರು.

ADVERTISEMENT

‘ಬಸವಣ್ಣನ ಆಸೆಗಳನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಅವುಗಳನ್ನು ಜಾರಿಗೆ ತರುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಇದನ್ನು ಸಹಿಸಿಕೊಳ್ಳದವರಿಗೆ ತಕ್ಕ ಪಾಠ ಕಲಿಸಿದರೆ ಬಸವಣ್ಣ, ರಾಯಣ್ಣ, ಅಂಬೇಡ್ಕರ್‌ಗೆ ಗೌರವ ಸಲ್ಲಿಸದಂತೆ ಆಗುತ್ತದೆ’ ಎಂದು ಹೇಳಿದರು.

‘ಹಿಂದುಳಿದ ವರ್ಗದಿಂದ ಬಂದು ಸಮಾಜದ ಬದಲಾವಣೆಗಾಗಿ ಪ್ರಯತ್ನಿಸುತ್ತಿದ್ದೇನೆ. ನನ್ನ ಪ್ರಯತ್ನಕ್ಕೆ ಕಲ್ಲು ಹಾಕಿ, ಅಡ್ಡಗಾಲು ಹಾಕಿ ಹೇಗಾದರೂ ಮಾಡಿ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಲು ಯತ್ನಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ದಯಮಾಡಿ ಯಾವುದೇ ಅವಕಾಶ ಮಾಡಿ ಕೊಡಬೇಡಿ’ ಎಂದು ಸಿದ್ದರಾಮಯ್ಯ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.