ಅಫಜಲಪುರ: ‘ಕಮ್ಯುನಿಸ್ಟ್ ಪಕ್ಷವು, ದುಡಿಯುವ ವರ್ಗದವರ ಪರವಾಗಿದೆ. ನ್ಯಾಯ ಬಯಸುವ ಸಮಸ್ತ ಶ್ರಮಿಕರು ಪಕ್ಷದೊಂದಿಗೆ ಹೆಜ್ಜೆ ಹಾಕಬೇಕು’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ತಿಳಿಸಿದರು.
ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಶನಿವಾರ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ದೇಶ ಹಾಗೂ ರಾಜ್ಯದಲ್ಲಿ ನಿರುದ್ಯೋಗ ಬಡತನ ತಾಂಡವವಾಡುತ್ತಿದೆ. ಆಳುವ ಸರ್ಕಾರಗಳು ಪ್ರಜೆಗಳ ಹಿತ ಕಾಯುವ ಬದಲಿಗೆ ಕಾರ್ಪೋರೆಟ್ಗಳ ಸಖ್ಯದಲ್ಲಿವೆ. ಜನರಯು ತಮ್ಮ ಹಕ್ಕುಗಳಿಗಾಗಿ ಹೋರಾಡಬಾರದು ಎಂದು ಕೋಮುವಾದಿ ಭಾವನೆ ಬಿತ್ತುತ್ತಿದ್ದಾರೆ. ಸೌಹಾರ್ದ ಪರಂಪರೆಯ ನಾಡಿಗೆ ಅಪಾಯ ತಂದಿದ್ದಾರೆ’ ಎಂದು ಹೇಳಿದರು.
‘ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಪ್ರತಿ 3 ವರ್ಷಕ್ಕೊಮ್ಮೆ ಸಮ್ಮೇಳನಗಳು ನಡೆದು, ಸಮಿತಿಗಳ ರಚನೆಯಾಗುತ್ತದೆ. ನ. 24, 25 ರಂದು 2 ದಿನಗಳವರೆಗೆ ಪಕ್ಷದ ಜಿಲ್ಲಾ ಸಮ್ಮೇಳನವು ಕಲಬುರಗಿಯಲ್ಲಿ ನಡೆಯಲಿದೆ’ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶ್ರೀಮಂತ ಬಿರಾದಾರ ಮಾತನಾಡಿದರು. ಗುರು ಚಾಂದಕವಠೆ ಅವರನ್ನು ತಾಲ್ಲೂಕು ಸಮಿತಿ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಸಮ್ಮೇಳನಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ರಾಜ್ಯ ಸಮಿತಿ ಸದಸ್ಯೆ ಶಾಂತಾ ಘಂಟಿ ಪಕ್ಷದ ಧ್ವಜಾರೋಹಣ ನೆರವೇರಿಸಿದರು.
ಬಸಮ್ಮ ಬಳೂರಗಿ, ಸಿದ್ದಮ್ಮ, ಬಿಸ್ಮಿಲ್ಲಾ, ಶಾಂತಾ, ಗ್ರಾಮದ ರೈತ ಮುಖಂಡರಾದ ಅರ್ಜುನ ಸೋಮಜಾಳ, ಮನೋಹರ ರಾಠೋಡ, ಮಚೇಂದ್ರ ಜಾಬಾದಿ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಗುರು ಚಾಂದಕವಠೆ ನಿರೂಪಿಸಿದರು. ಸಾಯಬಣ್ಣ ಜಮಾದಾರ ಸ್ವಾಗತಿಸಿದರು. ಸಿದ್ದಮ್ಮ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.