ಚಿಂಚೋಳಿ: ‘ಪಟ್ಟಣದ ಕಲ್ಯಾಣ ಗಡ್ಡಿ ಬಡಾವಣೆಯ ಮಹಾಂತೇಶ್ವರ ಮಠದ ಬಳಿಯ ಸೂಫಿ ದಾವಲ ಮಲಿಕ್ ಅವರ ಪ್ರಾರ್ಥನಾ ಸ್ಥಳ ಈಗ ದರ್ಗಾ ಸ್ವರೂಪ ಹೊಂದಿದ್ದು, ಇದು ಮಹಾಂತೇಶ್ವರ ಮಠದ ಆಸ್ತಿಯಾಗಿದೆ. ಇದನ್ನು ಪುರಸಭೆಯವರು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸುವುದಕ್ಕೆ ತಮ್ಮ ವಿರೋಧವಿದೆ’ ಎಂದು ಮಹಾಂತೇಶ್ವರ ಭಕ್ತರು ಮತ್ತು ಪಟ್ಟಣದ ನಾಗರಿಕರು ತಕರಾರು ಸಲ್ಲಿಸಿದರು.
ಮಹಾಂತೇಶ್ವರ ಮಠದಿಂದ ಪುರಸಭೆ ಕಚೇರಿಗೆ ಬಂದ ಭಕ್ತರು, ಮಂಗಳವಾರ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಅವರಿಗೆ ಅರ್ಜಿ ಸಲ್ಲಿಸಿದರು.
‘ಈಗಾಗಲೇ ದಾವಲ ಮಲಿಕರ ಸ್ಥಳ ವಕ್ಫ್ ಆಸ್ತಿ ಎಂದು ನಮೂದಿಸಿ ನೋಟೀಸು ಅಂಟಿಸಿ ಆಕ್ಷೇಪಣೆ ಆಹ್ವಾನಿಸಿದಾಗ ಇದು ಜನರ ಗಮನಕ್ಕೆ ಬಂದಿದೆ. ಆದರೆ ವಾಸ್ತವವಾಗಿ ಮಹಾಂತೇಶ್ವರರು ಹಾಗೂ ದಾವಲ ಮಲಿಕ್ ಭಿನ್ನ ಮತ ಧರ್ಮದವರಾದರೂ ಸಮನ್ವಯದ ಸೌಹಾರ್ದ ಮೂರ್ತಿಗಳಾಗಿದ್ದರು. ಒಂದು ರೀತಿಯಲ್ಲಿ ಗುರು ಶಿಷ್ಯರಂತೆ ಇದ್ದರು. ಹೀಗಾಗಿ ದಾವಲ ಮಲಿಕರ ಪ್ರಾರ್ಥನಾ ಸ್ಥಳ ಮಹಾಂತೇಶ್ವರ ಮಠದ ಆಸ್ತಿಯಾಗಿದೆ. ಹೀಗಾಗಿ ಇದನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸುವುದಕ್ಕೆ ನಮ್ಮ ಪ್ರಬಲ ಆಕ್ಷೇಪಣೆಯಿದೆ’ ಎಂದು ಮಠದ ಭಕ್ತರು ಮನವಿಯಲ್ಲಿ ವಿವರಿಸಿದ್ದಾರೆ.
ಹಿರಿಯರಾದ ಸಂಗಪ್ಪ ಮಾಸ್ತರ ಪಾಲಾಮೂರ, ಜಿ.ಪಂ. ಮಾಜಿ ಸದಸ್ಯ ಗೌತಮ ಪಾಟೀಲ, ಬಿಜೆಪಿ ಮಾಜಿ ಅಧ್ಯಕ್ಷ ಸಂತೋಷ ಗಡಂತಿ, ಮುಖಂಡರಾದ ನಾಗರಾಜ ಮಲಕೂಡ, ಸಚ್ಚಿದಾನಂದ ಸುಂಕದ, ಶ್ರೀಹರಿ ಕಾಟಾಪುರ, ಶರಣು ಪಾಟೀಲ, ಸಿದ್ದಯ್ಯ ಸ್ವಾಮಿ, ನಂದಿಕುಮಾರ ಶಿವಪುರಿ, ನೀಲಕಂಠ ಸೀಳಿನ್, ಗೋಪಾಲರಡ್ಡಿ ಕೊಳ್ಳೂರು, ಹಣಮಂತ ಕೋರಿ, ಶಂಕರ ಶಿವಪುರಿ, ವೀರೇಶ ಯಂಪಳ್ಳಿ, ಮಹಾಂತೇಶ ಮಜ್ಜಗಿ, ಸಂತೋಷ ಚಿಂತಲ ಸೇರಿದಂತೆ ಹಲವು ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.