ಆಳಂದ: ‘ಯುವಕರು ಮೋಜು, ತಮಾಷೆಗೆ ಮಾದಕ ವಸ್ತುಗಳ ಸೇವನೆಯತ್ತ ಆಕರ್ಷಿತರಾಗುತ್ತಿರುವುದು ಅವರ ಭವಿಷ್ಯಕ್ಕೆ ಅಪಾಯಕಾರಿ ಆಗುತ್ತಿದೆ’ ಎಂದು ಆಳಂದ ಡಿವೈಎಸ್ಪಿ ಗೋಪಿ ಆರ್. ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸ್ಥಳೀಯ ಪೋಲಿಸ್ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಮಾದಕ ವಸ್ತಗಳ ವಿರೋಧಿ ದಿನ ಹಾಗೂ ಅಪರಾಧ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯುವಕರು ಉತ್ತಮ ಹವ್ಯಾಸ ರೂಢಿಸಿಕೊಂಡು ಜೀವನ ಉಜ್ವಲಗೊಳಿಸಿಕೊಳ್ಳಬೇಕು. ಆದರೆ ಅಫೀಮು, ಗಾಂಜಾ, ತಂಬಾಕು ಹಾಗೂ ಡ್ರಗ್ಸ್ನಂತಹ ಮಾದಕ ವಸ್ತಗಳ ಹಿಂದೆ ಬಿದ್ದು, ಅಮೂಲ್ಯ ಜೀವನ ಹಾಗೂ ತಂದೆ–ತಾಯಿ ಹೆಸರನ್ನು ಹಾಳು ಮಾಡುತ್ತಿರುವುದು ಕಳವಳಕಾರಿ. ಮಾದಕದ ನಶೆಯಲ್ಲಿ ಅಪರಾಧ ಕೃತ್ಯಗಳಲ್ಲಿ ಕೂಡ ಭಾಗಿಯಾಗುತ್ತಿದ್ದಾರೆ. ಇದೊಂದು ಸಾಮಾಜಿಕ ಪಿಡುಗಿನ ರೂಪದಲ್ಲಿ ಹೆಚ್ಚುತ್ತಿದೆ’ ಎಂದು ಹೇಳಿದರು.
ಪಿಐ ಮಹಾದೇವ ಪಂಚಮುಖಿ ಮಾತನಾಡಿ, ‘ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ದುಶ್ಚಟಗಳ ದಾಸರಾದರೆ ಸಾಧನೆ ಸಾಧ್ಯವಾಗುವುದಿಲ್ಲ’ ಎಂದರು.
ಧರ್ಮಸ್ಥಳ ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಕೆ, ಪ್ರಾಂಶುಪಾಲ ರವಿಚಂದ್ರ ಕಂಟೇಕುರೆ ಮಾತನಾಡಿದರು. ಮುಖ್ಯಶಿಕ್ಷಕ ತಿರ್ಥೇ, ಶಾಂತಪ್ಪ ಕೋರೆ ಕಾಲೇಜಿನ ಸಿಬ್ಬಂದಿ, ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.