ADVERTISEMENT

ಅರಣ್ಯ ಭೂಮಿ ಒತ್ತುವರಿ ಆರೋಪ ಶುದ್ಧ ಸುಳ್ಳು: ಸಂಸದ ಸಾಗರ ಖಂಡ್ರೆ

ಡಿಸಿಸಿ ಬ್ಯಾಂಕ್‌ನ ನವೀಕೃತ ಶಾಖೆ ಉದ್ಘಾಟನೆ: ಸಂಸದ ಸಾಗರ್ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 15:38 IST
Last Updated 10 ಸೆಪ್ಟೆಂಬರ್ 2024, 15:38 IST
ಚಿಂಚೋಳಿ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್‌ನ ನವೀಕೃತ ಶಾಖೆಯನ್ನು ಸಂಸದ ಸಾಗರ ಖಂಡ್ರೆ ಮಂಗಳವಾರ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ ಗೋನಾಯಕ, ನಿರ್ದೇಶಕ ಅಜೀತ ಪಾಟೀಲ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಶರಣಪ್ಪ ಮಟ್ಟೂರು ಹಾಜರಿದ್ದರು
ಚಿಂಚೋಳಿ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್‌ನ ನವೀಕೃತ ಶಾಖೆಯನ್ನು ಸಂಸದ ಸಾಗರ ಖಂಡ್ರೆ ಮಂಗಳವಾರ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ ಗೋನಾಯಕ, ನಿರ್ದೇಶಕ ಅಜೀತ ಪಾಟೀಲ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಶರಣಪ್ಪ ಮಟ್ಟೂರು ಹಾಜರಿದ್ದರು   

ಚಿಂಚೋಳಿ: ‘ನಮ್ಮ ಕುಟುಂಬದಲ್ಲಿ ಯಾರು ಅರಣ್ಯ ಜಮೀನು ಒತ್ತುವರಿ ಮಾಡಿಲ್ಲ. ಇಂತಹ ಆರೋಪ ಶುದ್ಧ ಸುಳ್ಳು’ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.

ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್‌ನ ನವೀಕರಿಸಿದ ಶಾಖೆಯನ್ನು ಮಂಗಳವಾರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ನಿಮ್ಮ ಚಿಕ್ಕಪ್ಪ ಅಮರ ಖಂಡ್ರೆ ಅವರು ಹೊನ್ನಿಕೇರಿ ಮತ್ತು ಅತಿವಾಳ ಗ್ರಾಮದಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡಿದ್ದು, ಅರಣ್ಯ ಸಚಿವರನ್ನು ಕೈಬಿಡಬೇಕು ಎಂದು ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾದ ಬಗ್ಗೆ ಪ್ರಶ್ನಿಸಿದಾಗ, ‘ಇದು ಆಧಾರ ರಹಿತವಾದ ಆರೋಪವಾಗಿದ್ದು, ಸಂಪೂರ್ಣ ಸುಳ್ಳಿನಿಂದ ಕೂಡಿದೆ’ ಎಂದರು.

ಪ್ರಕೃತಿ ವಿಕೋಪದಿಂದ ರೈತರ ಬೆಳೆಹಾನಿ ಹಾಗೂ ಮನೆಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಸರ್ಕಾರ ನೀಡುತ್ತಿರುವ ಪರಿಹಾರ ಅಲ್ಪಪ್ರಮಾಣದ್ದಾಗಿದೆ ಎಂದು ತಿಳಿಸಿದಾಗ, ‘ಈ ಬಗ್ಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪರಿಷ್ಕರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ದಕ್ಷಿಣ ಭಾರತ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮದಲ್ಲಿ ಪರಿಸರ ಪ್ರವಾಸಿ ಚಟುವಟಿಕೆ ಉತ್ತೇಜನಕ್ಕೆ ಯೋಜನೆ ರೂಪಿಸಬೇಕು ಎಂದು ಕೇಳಿದಾಗ, ‘ತಂದೆಯವರೊಂದಿಗೆ ಈ ಕುರಿತು ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್, ಮಾಜಿ ಎಂಎಲ್‌ಸಿ ಶರಣಪ್ಪ ಮಟ್ಟೂರು, ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸೋಮಶೇಖರ ಗೋನಾಯಕ, ನಿರ್ದೇಶಕ ಅಜೀತ ಬಾಬುರಾವ ಪಾಟೀಲ, ನಾಗೇಶ್ವರರಾವ ಮಾಲಿಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಶರಣು ಪಾಟೀಲ ಮೊದಲಾದವರು ಹಾಜರಿದ್ದರು.

ಸಹಕಾರಿ ಸಾಲ ಮನ್ನಾ: ಬಿಡುಗಡೆಯಾಗದ ಹಣ

ಚಿಂಚೋಳಿ: 2018ರಲ್ಲಿ ಅಧಿಕಾರದಲ್ಲಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ‘ರಾಜ್ಯದ ಸಹಕಾರಿ ಸಾಲ ಮನ್ನಾ ಘೋಷಿಸಿದ್ದಾರೆ. ಅದರಂತೆ ಡಿಸಿಸಿ ಬ್ಯಾಂಕ್‌ನ ದಾಖಲೆಗಳ ಪ್ರಕಾರ ಅರ್ಹ ರೈತರ ಸಾಲ ಶೂನ್ಯ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಈವರೆಗೂ ಸಾಲಮನ್ನಾದ ಬಿಡಿಗಾಸು ಬಂದಿಲ್ಲ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ ಗೋನಾಯಕ ಬೇಸರ ವ್ಯಕ್ತಪಡಿಸಿದರು.

‘ನಾವು ಬೇರೆ ಕಡೆ ಸಾಲ ತಂದು ರೈತರಿಗೆ ಸಾಲ ಕೊಡಬೇಕಾದ ಸ್ಥಿತಿಯಿದೆ. ಅವರು ಘೋಷಿಸಿದರು ಈಗ ನಮ್ಮ ಸರ್ಕಾರವೇ ಈ ಹಣ ಬಿಡುಗಡೆ ಮಾಡುವಂತಾಗಿದೆ. ಈ ಹಣ ಬಂದರೆ ರೈತರಿಗೆ ಹೊಸದಾಗಿ ಸಾಲ ನೀಡಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.