ಶಹಾಬಾದ್: ‘ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ವೈದ್ಯರ ನಿರ್ಲಕ್ಷ್ಯದಿಂದ ಮಗುವಿನ ಸಾವಾಗಿದೆ’ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಮತ್ತು ಗೋಳಾ(ಕೆ) ಗ್ರಾಮದ ಜನರು ಬುಧವಾರ ಸಂಜೆ ಆಸ್ಪತ್ರೆ ಎದುರು ಮಗುವಿನ ಶವವಿಟ್ಟು ಪ್ರತಿಭಟಿಸಿದರು.
ಗೋಳಾ (ಕೆ) ಗ್ರಾಮದ ಗರ್ಭಿಣಿ ಬಸಮ್ಮ ಸಾಬಣ್ಣ ಅವರು 7 ತಿಂಗಳಿಂದ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಹೇಳಿದ ಹಾಗೆ ಚಿಕಿತ್ಸೆ ಮತ್ತು ಸ್ಕ್ಯಾನಿಂಗ್ ಕೂಡ ಮಾಡಿಸಿದ್ದಾರೆ. 8ನೇ ತಿಂಗಳಿಗೆ ಇವರು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಕಳುಹಿಸಿದ್ದರು. ಜಿಲ್ಲಾ ಆಸ್ಪತ್ರೆಯವರು ಮಗುವಿನ ತಪಾಸಣೆ ಮಾಡಿ, ಮಗುವಿನ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿದ ಬಳಿಕ ಮಗುವಿಗೆ ಗಡ್ಡೆಯಾಗಿದ್ದು, ಮಗು ಬದುಕುವದಿಲ್ಲ. ಮನೆಗೆ ತೆಗೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದಾರೆ. ಮನೆಗೆ ತಂದಾಗ ಮಗು ಮೃತಪಟ್ಟಿದೆ.
‘ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷ್ಯ ವಹಿಸಿದ ಶಹಾಬಾದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರನ್ನು ಕೂಡಲೇ ಅಮಾನತು ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಕುಟುಂಬಸ್ಥರು ಆಸ್ಪತ್ರೆ ಎದುರು ಧರಣಿ ಕುಳಿತರು. ಸ್ಥಳಕ್ಕೆ ಟಿಎಚ್ಒ, ಜಿಲ್ಲಾ ಆರೋಗ್ಯಾಧಿಕಾರಿ ಬರುವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು.
ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ವೀರನಾಥ ಕನಕ, ಡಾ.ಜಮೀಲ್ ಹಾಜರಿದ್ದರು.
ಕರವೇ ತಾಲ್ಲೂಕು ಅಧ್ಯಕ್ಷ ಯಲ್ಲಾಲಿಂಗ ಹೈಯಾಳಕರ, ಮುಖಂಡ ಬಸವರಾಜ ಮಯೂರ, ಉಪಾಧ್ಯಕ್ಷ ಮಹೇಶ ಕಾಂಬಳೆ, ಕಾರ್ಯದರ್ಶಿ ಮಹೇಶ ಹರ್ಲಕಟ್ಟಿ, ನಿಂಗಪ್ಪ ಕನಗನಳ್ಳಿ, ಗ್ರಾ.ಪಂ. ಸದಸ್ಯ ಶ್ರೀಕಾಂತ ಗಂಗಬೊ, ಪ್ರಭು ಚವ್ಹಾಣ್, ಸಾಗರ ಬಂದೂಕ, ಶಿವು ಸುಬೇದಾರ, ಸುರೇಶ ಹೈಯಾಳಕರ, ಶಶಿ ಪೂಜಾರಿ, ಆಂಜನೇಯ ಕುಂಬಾರ ಹಾಜರಿದ್ದರು.
ನಗರ ಪೋಲಿಸ್ ಠಾಣೆಯ ಎಎಸ್ಐ ಹಣಮಂತ ಅಷ್ಠಗಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.