ಅಫಜಲಪುರ: ತಾಲ್ಲೂಕಿನ ಸಿದ್ಧನೂರು ಗ್ರಾಮದಿಂದ ಅತನೂರು ಗ್ರಾಮಕ್ಕೆ ತಲುಪುವ 2 ಕಿ.ಮೀ ರಸ್ತೆಯ ಎರಡು ಬದಿಯಲ್ಲಿ ಮುಳ್ಳುಕಂಟಿಗಳು ಬೆಳೆದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಅವುಗಳನ್ನು ತರವು ಮಾಡಿ ಎಂದು ತಾ.ಪಂ ಇಒ, ಗ್ರಾಮ ಪಂಚಾಯಿತಿಗೆ ದೂರೂ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಶನಿವಾರ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.
ಗ್ರಾ.ಪಂ ಸದಸ್ಯ ಲತಿಫ್ ಕಲಬುರಗಿ, ಶಫೀಕ್ ಸೇಡಂ ಮಾತನಾಡಿ, ‘ರಸ್ತೆಯ ಎರಡೂ ಬದಿ ಮುಳ್ಳುಗಂಟಿಗಳು ಬೆಳೆದಿವೆ. ಮಳೆ ಬಂದರೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಧಿಸಿದವರಿಗೆ ಹಲವು ಸಲ ಮನವಿ ಮಾಡಿದರೂ ಮುಳ್ಳುಕಂಟಿಗಳನ್ನು ತೆರವು ಮಾಡುತ್ತಿಲ್ಲ. ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳದಿದ್ದರೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.
‘ನಮ್ಮ ಗ್ರಾಮಕ್ಕೆ ರೇವೂರ್ (ಬಿ) ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು. ನಾವು ಕೆಲಸ ಕಾರ್ಯಗಳಿಗೆ ನಿತ್ಯ ಅಲ್ಲಿ ಹೋಗುತ್ತೇವೆ. ಹೀಗಾಗಿ ನಮಗೆ ರಸ್ತೆ ದುರಸ್ತಿ ಅವಶ್ಯಕತೆಯಾಗಿದೆ. ಒಂದು ವೇಳೆ ವಾರದಲ್ಲಿ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಆರಂಭ ಮಾಡುತ್ತೇವೆ’ ಎಂದು ಸಿದ್ಧನೂರು ಗ್ರಾಮದ ಮೈಬುಬ್ ನದಾಫ್, ಹಾಸನಪ್ಪ ಚಿಕ್ಕರೆವೂರ, ಗುರು ಕುಮಸಗಿ ಹೇಳಿದರು.
ಮುಖಂಡರಾದ ಅರುಣ ಹೆರೂರ್, ರಮೇಶ್ ಕೌಲಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.