ಶಹಾಬಾದ್: ತಾಲೂಕಿನ ಭಂಕೂರು ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳ ಮುಂದೆ ಸಗಣಿಯ ಕುಳ್ಳು ಇಟ್ಟು ಮಹನೀಯರಿಗೆ ಅವಮಾನಿಸಿದ ಆರೋಪದ ಮೇಲೆ ಗ್ರಂಥಪಾಲಕಿ ಪಾರ್ವತಿ ಮಠಪತಿ ಅವರನ್ನು ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಲ್ಲಿನಾಥ ರಾವೂರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಲಕ್ಷ್ಮಿಕಾಂತ್ ಕಂದಗೂಳ ಎಂಬುವವರು ಫೋಟೊ ಮತ್ತು ವಿಡಿಯೊ ದಾಖಲೆಗಳ ಸಹಿತ ದೂರು ನೀಡಿದ್ದರು.
‘ಕೆಕೆಆರ್ಡಿಬಿ ಅನುದಾನದಲ್ಲಿ ಗ್ರಂಥಾಲಯಕ್ಕೆ ನೀಡಿರುವ ಯುಪಿಎಸ್ ಬ್ಯಾಟರಿ ಮತ್ತು ಜೆರಾಕ್ಸ್ ಯಂತ್ರಗಳ ಖರೀದಿ ಹಣವನ್ನು ಪೋಲು ಮಾಡಿದ್ದಾರೆ. ಗ್ರಂಥಾಲಯದಲ್ಲಿ ಇರುವ ಬಯೋಮೆಟ್ರಿಕ್ ಯಂತ್ರವನ್ನು ಎರಡು ಬಾರಿ ಉದ್ದೇಶಪೂರ್ವಕವಾಗಿ ಹಾಳು ಮಾಡಿದ್ದಾರೆ. ಗಣರಾಜ್ಯೋತ್ಸವ ದಿನದಂದು ಧ್ವಜಾರೋರೋಣ ನೆರವೇರಿಸದೆ ಅವಮಾನಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷ–ಉಪಾಧ್ಯಕ್ಷರ ಸಹಿಯನ್ನು ನಕಲು ಮಾಡಿ ನಾಗರಾಜ್ ಎಂಬ ವ್ಯಕ್ತಿಯನ್ನು ಗ್ರಂಥಾಲಯಕ್ಕೆ ನೇಮಕ ಮಾಡಿಕೊಳ್ಳಲು ಜಿಲ್ಲಾ ಗ್ರಂಥಾಲಯಕ್ಕೆ ಶಿಫಾರಸು ಮಾಡಿದ್ದಾರೆ. ಅಲ್ಲದೆ ಚಿತ್ತಾಪುರ ತಾಲ್ಲೂಕು ಅಧಿಕಾರಿಯೊಬ್ಬರು ಭೇಟಿ ನೀಡಿದ ಸಂದರ್ಭದಲ್ಲಿ ಅನಧಿಕೃತವಾಗಿ ಗೈರಾಗಿದ್ದರು’ ಎಂಬ ಆರೋಪಗಳ ಮೇಲೆ ಅವರನ್ನು ಅಮಾನತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.