ಚಿಂಚೋಳಿ: ಇಲ್ಲಿನ ಚಂದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಭಾನುವಾರ ಏರ್ಪಡಿಸಿದ್ದ ಪ್ರಥಮ ಶ್ವಾನ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪ್ರದರ್ಶನದಲ್ಲಿ ಮುಧೋಳ ಹೌಂಡ್ ತಳಿಯ ನಾಯಿ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ತಾಲ್ಲೂಕಿನ ಕೆರೊಳ್ಳಿ ಗ್ರಾಮದ ನಾಯಿಯ ಮಾಲೀಕ ಚನ್ನಪ್ಪ ತಳವಾರ ಅವರು ನಾಯಿಯ ಜತೆ ವೇದಿಕೆ ಹತ್ತಿ ಇಲಾಖೆಯ ಉಪನಿರ್ದೆಶಕ ಡಾ. ಶಫಿಯೋದಿದ್ದನ್ ಅವುಂಟಿ ಅವರಿಂದ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ಸ್ವೀಕರಿಸಿದರು.
ಮುಧೋಳ್ ಹೌಂಡ್, ಪೋಮರಿಯನ್, ಲ್ಯಾಬ್ ರಡಾಕ್, ಸ್ಟಿಜು, ಜರ್ಮನ್ ಶೆಫರ್ಡ, ಪಿಕ್, ಡಾಬರಮನ್, ಸೈಬೇರಿಯನ್ ಹಸ್ಕಿ, ಚೌಚೌ, ಫಾಕ್ಸ್ ಟೆರಿಯರ್, ಗೋಲ್ಡನ್ ರಿಟ್ಟರ್ವೈರ್ ತಳಿಯ ನಾಯಿಗಳು ಪ್ರದರ್ಶನಕ್ಕೆ ಬಂದಿದ್ದವು.
ಪ್ರತಿಯೊಂಡು ತಳಿಯ ನಾಯಿಗಳನ್ನು ವಾಕ್ ಮಾಡಿಸಿ ಪ್ರಥಮ ದ್ವಿತೀಯ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು. ಹೀಗೆ ಆಯ್ಕೆಯಾದ ನಾಯಿಗಳಲ್ಲಿಯೇ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟಕ್ಕೆ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೆಶಕರಾರ ಡಾ. ಶಫಿಯೋದ್ದಿನ್ ಅವಂಟಿ, ಸಹಾಯಕ ನಿರ್ದೆಶಕ ಡಾ. ಧನರಾಜ ಬೊಮ್ಮಾ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಬೀದರ್ನ ಪಶುವೈದ್ಯಕೀಯ ಮಹಾವಿದ್ಯಾಲಯದ ಡಾ. ವೆಂಕಣ್ಣಗೌಡ ಮತ್ತು ಡಾ. ಭಗವಂತಪ್ಪ ನಿರ್ಣಾಯಕರಾಗಿದ್ದರು.
11ಕ್ಕೂ ಹೆಚ್ಚು ತಳಿಗಳ ಒಟ್ಟು 85ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡಿದ್ದವು. ತಾಂಡೂರಿನ ವೀರೇಶ ಅವರು ನಾಯಿಯನ್ನು ತರಬೇತುಗೊಳಿಸಿದ್ದು ಅದರಿಂದಲೇ ಸಲಾಮ್ ಪಡೆದದ್ದು ವಿಶೇಷವಾಗಿತ್ತು.
ಡಾ.ತೃಪ್ತಿ ಕಟ್ಟಿಮನಿ, ಡಾ.ಮಲ್ಲಿಕಾರ್ಜುನ ಗುತ್ತೇದಾರ, ಡಾ.ಸಯೀದಾ ನಿಲೋಫರ್, ಡಾ.ಸೂರ್ಯಕಾಂತ ಪಡಶೆಟ್ಟಿ, ಡಾ.ರಘುವೀರ ಪ್ರಸಾದ, ಡಾ.ಇಮ್ರಾನ್ ಸಾಧಿಕ್, ಡಾ.ರಾಮಕುಮಾರ, ಡಾ.ರಾಜವರ್ಧನ, ಡಾ.ಮಹಮದ್ ಮಜರ್, ಡಾ.ನಸೀರುದ್ದಿನ್, ಡಾ.ಸಂತೋಷ ರಾಗಾ, ಡಾ. ಶಿವಕಾಂತ, ಡಾ.ಒಂಕಾರ ಪಂಚಾಳ್, ಡಾ.ಗುರುನಾಥ ಮೊದಲಾದವರು ಮೇಳದ ಯಶಸ್ವಿಗೆ ವಿವಿಧ ಜವಾಬ್ದಾರಿ ನಿರ್ವಹಿಸಿದರು.
ಪ್ರಥಮ ಶ್ವಾನ ಪ್ರದರ್ಶನದಲ್ಲಿ ನನ್ನ ನಾಯಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಲಭಿಸಿದ್ದು ಖುಷಿ ತಂದಿದೆ. ದೇಶಿಯ ತಳಿಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದು ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ- ಚನ್ನಪ್ಪ ತಳವಾರ್ ಕೆರೊಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.