ADVERTISEMENT

ಕಲಬುರಗಿ: ಒಡಲು ಬಗೆದರೂ ಹನಿ ನೀರಿಲ್ಲ...

ಕುಡಿಯುವ ನೀರು ಕೊರತೆಯ 282 ಸಂಭವನೀಯ ಗ್ರಾಮಗಳ ಪೈಕಿ ಅಫಜಲಪುರ, ಆಳಂದ, ಕಲಬುರಗಿಯಲ್ಲೇ ಅತ್ಯಧಿಕ

ಮಲ್ಲಿಕಾರ್ಜುನ ನಾಲವಾರ
Published 19 ಫೆಬ್ರುವರಿ 2024, 5:56 IST
Last Updated 19 ಫೆಬ್ರುವರಿ 2024, 5:56 IST
ಜೇವರ್ಗಿ ತಾಲ್ಲೂಕಿನ ರಾಸಣಗಿ ಗ್ರಾಮದಲ್ಲಿ ಬಳಕೆಯಾಗದ ಕುಡಿಯುವ ನೀರು ಶುದ್ಧೀಕರಣ ಘಟಕ
ಜೇವರ್ಗಿ ತಾಲ್ಲೂಕಿನ ರಾಸಣಗಿ ಗ್ರಾಮದಲ್ಲಿ ಬಳಕೆಯಾಗದ ಕುಡಿಯುವ ನೀರು ಶುದ್ಧೀಕರಣ ಘಟಕ   

ಕಲಬುರಗಿ: ಬೇಸಿಗೆ ಆರಂಭಕ್ಕೂ ಮುನ್ನವೇ ಸೂರ್ಯ ನಿಗಿ ನಿಗಿ ಬೆಂಕಿ ಕಾರುತ್ತಿದ್ದಾನೆ. ಬರದಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದೆ. ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ತೆರೆದ ಬಾವಿ, ಕೆರೆಗಳಲ್ಲಿನ ನೀರು ಬತ್ತುತ್ತಿದೆ. ಜಿಲ್ಲೆಯ ಜೀವ ನದಿ ಭೀಮೆಯ ಒಡಲೂ ಬರಿದಾಗಿದೆ. ನಗರವೂ ಸೇರಿ ನೂರಾರು ಹಳ್ಳಿಗರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಬರದ ಛಾಯೆ ಆವರಿಸಿಕೊಳ್ಳುವ ಕಲಬುರಗಿಯು ಬರಪೀಡಿತ ಹಣೆಪಟ್ಟಿ ಅಂಟಿಸಿಕೊಂಡಿದೆ. ಕೆರೆ–ಕಟ್ಟೆಗಳಲ್ಲಿ ನೀರಿಲ್ಲದೆ ಮುಂದೆ ಭೀಕರ ಜಲಕ್ಷಾಮ ಸಂಭವಿಸುತ್ತದೆಯೋ ಎಂಬ ಭೀತಿ ಜನರನ್ನು ಕಾಡುತ್ತಿದೆ. ಮತ್ತೊಂದು ಕಡೆ ಕೊಳವೆ ಬಾವಿ ಕೊರೆದರೂ ನಿರೀಕ್ಷಿತ ಮಟ್ಟದಲ್ಲಿ ನೀರು ಬರುತ್ತಿಲ್ಲ. 3–4 ಇಂಚು ನೀರು ಜಿನುಗಿದರೂ 8–9 ದಿನಗಳಲ್ಲಿ ಏಕಾಏಕಿ ಸ್ಥಗಿತ ಆಗುತ್ತಿರುವುದು ಅಧಿಕಾರಿಗಳನ್ನೂ ಆತಂಕಕ್ಕೆ ತಳ್ಳಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕುಡಿಯುವ ನೀರು ಎದುರಿಸುವ ಸಂಭವನೀಯ 282 ಗ್ರಾಮಗಳ ಪಟ್ಟಿ ಮಾಡಿದೆ. ಮೂರು ತಿಂಗಳ ಹಿಂದೆಯಷ್ಟೇ 193 ಗ್ರಾಮಗಳಿದ್ದವು. ಈಗ 89 ಗ್ರಾಮಗಳು ಸೇರ್ಪಡೆಯಾಗಿವೆ. ಮಾರ್ಚ್ ಅಂತ್ಯದ ಬಳಿಕ ಇನ್ನಷ್ಟು ಹಳ್ಳಿಗಳು ಈ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ADVERTISEMENT

ಅಫಜಲಪುರದಲ್ಲಿ 86, ಆಳಂದ ಮತ್ತು ಕಲಬುರಗಿ ಗ್ರಾಮೀಣದಲ್ಲಿ 45, ಚಿಂಚೋಳಿಯಲ್ಲಿ 15, ಚಿತ್ತಾಪುರದಲ್ಲಿ 14, ಕಲಬುರಗಿಯಲ್ಲಿ 40, ಜೇವರ್ಗಿಯಲ್ಲಿ 5, ಸೇಡಂನಲ್ಲಿ 28, ಕಾಳಗಿಯಲ್ಲಿ 17, ಕಮಲಾಪುರದಲ್ಲಿ 23, ಯಡ್ರಾಮಿಯಲ್ಲಿ 4 ಹಾಗೂ ಶಹಾಬಾದ್‌ನಲ್ಲಿ 5 ಗ್ರಾಮಗಳು ಸೇರಿ ಒಟ್ಟು 282 ಸಂಭವನೀಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರಲಿದೆ ಎಂದು ಗುರುತಿಸಲಾಗಿದೆ.

ಸದ್ಯ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಜನರಿಗೆ ನೀರು ಒದಗಿಸಲಾಗುತ್ತಿದೆ. ಕೊಳವೆ ಬಾವಿಗಳ ದುರಸ್ತಿ ಮಾಡಿದ್ದೇವೆ. ಉಳಿದ ಕಡೆ ನೀರಿಗೆ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಮೇಲ್ನೋಟಕ್ಕೆ ಹೇಳಿಕೊಳ್ಳುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸಲು ತಯಾರಿ ನಡೆಸುತ್ತಿದ್ದಾರೆ.

‘ಅಫಜಲಪುರ, ಆಳಂದ ಹಾಗೂ ಕಲಬುರಗಿ ತಾಲ್ಲೂಕುಗಳಲ್ಲಿ ಕೊರೆದ ಅರ್ಧದಷ್ಟು ಕೊಳವೆ ಬಾವಿಗಳಲ್ಲಿ ನೀರೇ ಬಂದಿಲ್ಲ. ಕೆಲವು ಕಡೆ ನೀರು ಬಿದ್ದ ವಾರದಲ್ಲೇ ಅವು ಬತ್ತಿ ಹೋಗಿವೆ. ಪ್ರತಿ ಬಾರಿ ಬರಗಾಲ ಬಂದಾಗ ಅಂತರ್ಜಲ ಮಟ್ಟ ನಮ್ಮ ನಿಯಂತ್ರಣ ಸಿಗದಷ್ಟು ಆಳಕ್ಕೆ ಕುಸಿಯುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.

ಭೀಮಾ ಒಡಲು ಬರಿದಾಗಿದೆ. ಅಮರ್ಜಾ, ಕಾಗಿಣಾ ಮತ್ತು ಮುಲ್ಲಾ ಮಾರಿ ನದಿಗಳಲ್ಲಿ ಸಹ ನೀರಿನ ಪ್ರಮಾಣ ತಗ್ಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಒತ್ತುವರಿ ಮತ್ತು ಹುಳು ತುಂಬಿದ್ದರಿಂದ ಕೆರೆಗಳ ನೀರಿನ ಸಂಗ್ರಹವೂ ಕುಸಿದಿದೆ. ಜಲಮೂಲ ಇಲ್ಲದೆ ಪರ್ಯಾಯ ವ್ಯವಸ್ಥೆ ಮಾಡುವುದು ಹೇಗೆ ಎಂಬ ಯಕ್ಷ ಪ್ರಶ್ನೆ ಅಧಿಕಾರಿಗಳನ್ನೂ ಕಾಡುತ್ತಿದೆ.

ಪೂರಕ ಮಾಹಿತಿ: ಸಂಜಯ ಪಾಟೀಲ, ಜಗನ್ನಾಥ ಶೇರಿಕಾರ, ಮಲ್ಲಿಕಾರ್ಜುನ ಎಂ.ಎಚ್, ವೆಂಕಟೇಶ ಹರವಾಳ, ಶಿವಾನಂದ ಹಸರಗುಂಡಗಿ 

ಅಫಜಲಪುರ ತಾಲ್ಲೂಕಿನಲ್ಲಿ ಬತ್ತಿರುವ ಭೀಮಾ ನದಿಯ ಒಡಲು
ಜಲ ಮೂಲಗಳಿಂದ ಕೊಳವೆ ಮೂಲಕ ತೀರ ಅಗತ್ಯ ಇದ್ದಲ್ಲಿ ವಾಹನಗಳ ಮುಖೇನ ನೀರು ಸರಬರಾಜು ಮಾಡಲಾಗುವುದು. 151 ಕೊಳವೆ ಬಾವಿಗಳನ್ನು ಪತ್ತೆ ಹಚ್ಚಿ ಅವುಗಳ ದುರಸ್ತಿಗೂ ಟಾಸ್ಕ್‌ ಪೋರ್ಸ್‌ ಸಭೆಯಲ್ಲಿ ಸೂಚಿಸಲಾಗಿದೆ
ಅಲ್ಲಮಪ್ರಭು ಪಾಟೀಲ ಕಲಬುರಗಿ ದಕ್ಷಿಣ ಶಾಸಕರು
ಆಳಂದದಲ್ಲಿ ಕೊಳವೆ ಬಾವಿ ಕೊರೆಸಿದರು ಸಮರ್ಪಕ ನೀರು ಸಿಗುತ್ತಿಲ್ಲ. ಖಾಸಗಿ ಕೊಳವೆ ಬಾವಿ ತೆರೆದ ಬಾವಿಯ ಮೂಲಕ ನೀರು ಪೂರೈಸಲಾಗುವುದು
ಮಾನಪ್ಪ ಕಟ್ಟಿಮನಿ ಆಳಂದ ತಾ.ಪಂ ಇಒ
ಸರ್ಕಾರ ಆಲಮಟ್ಟಿ ಜಲಾಶಯದಿಂದ ಇಂಡಿ ಕಾಲುವೆ 18ರ ಮೂಲಕ ಭೀಮಾ ನದಿಗೆ ನೀರು ಹರಿಸಿದರೆ ಜಿಲ್ಲೆಯ ನೀರಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗುತ್ತದೆ
ಸಿದ್ದು ದಣ್ಣೂರ ಅಫಜಲಪುರ ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ
ಬೇಸಿಗೆಯಲ್ಲಿ ಮೂರು ದಿನಕ್ಕೊಮ್ಮೆ ನಲ್ಲಿ ನೀರು ಸರಬುರಾಜು ಮಾಡುತ್ತಾರೆ. ಕಟ್ಟಿಸಂಗಾವಿ ಸಮೀಪ ಭೀಮಾ ನದಿಯಲ್ಲಿ ನೀರು ಸಂಗ್ರಹಿಸಿಟ್ಟುಕೊಂಡರೆ ನೀರಿನ ಸಮಸ್ಯೆ ಎದುರಾಗುವುದಿಲ್ಲ
ಭೀಮರಾಯ ಮಡಿವಾಳ ಜೇವರ್ಗಿ ನಿವಾಸಿ
ಜೇವರ್ಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು
ಮರೆಪ್ಪ ಹಸನಾಪುರ ಜೇವರ್ಗಿ ನಿವಾಸಿ
ರಾಸಣಗಿ ಗ್ರಾಮದಲ್ಲಿ ಸುಮಾರು ₹ 42 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಕುಡಿಯುವ ನೀರು ಶುದ್ಧೀಕರಣ ಘಟಕ ಉಪಯೋಗಕ್ಕೆ ಬರುತ್ತಿಲ್ಲ. ಭೀಮಾ ನದಿ ನೀರು ಕಲುಷಿತವಾಗಿದ್ದು ಯಾರೂ ಉಪಯೋಗಿಸುತ್ತಿಲ್ಲ
ಮಲ್ಲೇಶಿ ಹೊಸಮನಿ ರಾಸಣಗಿ ಗ್ರಾಮಸ್ಥ
ಕಲಬುರಗಿ ಸಿಟಿಗೆ 26.68 ಎಂಎಲ್‌ಡಿ ಕೊರತೆ!
ಕಲಬುರಗಿ ನಗರದ ಸುಮಾರು 5.50 ಜನಸಂಖ್ಯೆಗೆ 108.68ಕ್ಕೂ ಅಧಿಕ ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್‌ ಡೇ) ಬೇಡಿಕೆ ಇದೆ. ಭೀಮಾ ನದಿಯಿಂದ 60 ಎಂಎಲ್‌ಡಿ ಹಾಗೂ ಬೆಣ್ಣೆತೋರಾ ನದಿಯಿಂದ 22 ಎಂಎಲ್‌ಡಿ ಸೇರಿ ಒಟ್ಟು 82 ಎಂಎಲ್‌ಡಿ ಸರಬರಾಜು ಆಗುತ್ತಿದೆ. ಆದರೆ ಇನ್ನೂ 26.68 ಎಂಎಲ್‌ಡಿ ಕೊರತೆ ಇದೆ.‌
20 ಬೋರ್‌ವೆಲ್ ನಿರುಪಯುಕ್ತ
ಚಿತ್ತಾಪುರ: ತಾಲ್ಲೂಕಿನ ರಾಜೋಳಾ ಡೋಣಗಾಂವ ದಿಗ್ಗಾಂವ ತೊನಸನಹಳ್ಳಿ (ಟಿ) ಚಾಮನೂರು ತುರನೂರು ಮಳಗ (ಎನ್) ನಾಲವಾರ ‌ಆಲೂರ ಹೊಸೂರು ಹಾಬಾನಾಯಕ ತಾಂಡಾ ಸನ್ನತಿ ಮತ್ತಿಮಡು ಮತ್ತು ಯಾಗಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯ ಸಂಭವನೀಯ ಗ್ರಾಮಗಳಾಗಿವೆ. 52 ಕೊಳವೆ ಬಾವಿಗಳ ಪೈಕಿ 32 ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. 20 ಕೊಳವೆ ಬಾವಿಗಳು ನಿರುಪಯುಕ್ತವಾಗಿದ್ದು ಕೆಲವು ಕೊಳವೆ ಬಾವಿಗಳ ಆಳಕ್ಕಿಳಿಸುವ ಕೆಲಸ ನಡೆಯುತ್ತಿದೆ. ‘ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಸಲಾಗಿದೆ. ನೀರು ಸರಬರಾಜು ವ್ಯವಸ್ಥೆಯ ಮೇಲೆ ನಿಗಾವಹಿಸಿದ್ದು ಕೆಲವು ಸಣ್ಣಪುಟ್ಟ ದುರಸ್ತಿ ಕೆಲಸಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಲಾಗುತ್ತಿದೆ’ ಎಂದು ತಾ.ಪಂ. ಇಒ ನೀಲಗಂಗಾ ಬಬಲಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಂಚೋಳಿ; ಏಪ್ರಿಲ್ ಬಳಿಕ ಸಮಸ್ಯೆ ಉದ್ಭವ!

ಚಿಂಚೋಳಿ: ಬಿಸಿಲಿನ‌ ಬೇಗೆ ಹೆಚ್ಚಾದಂತೆ ಅಂತರ್ಜಲ ಆಳಕ್ಕೆ ಇಳಿಯುತ್ತದೆ. ಹೀಗಾಗಿ ಪ್ರಸ್ತುತ ತಾಲ್ಲೂಕಿನಲ್ಲಿ ಮಾರ್ಚ್‌ ಅಂತ್ಯದವರೆಗೆ ಕುಡಿಯುವ ನೀರಿನ ಗಂಭೀರ ಸಮಸ್ಯೆ ಕಂಡುಬರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಕೆಲವು ಕಡೆ ಖಾಸಗಿ ಕೊಳವೆ ಬಾವಿ‌ ಮತ್ತು ತೆರೆದ ಬಾವಿ ಗುರುತಿಸಿ ಸಿದ್ಧತೆ ಕೈಗೊಳ್ಳಲಾಗಿದೆ. ಅನಿವಾರ್ಯವಾದ ಟ್ಯಾಂಕರ್ ಮೂಲಕ‌ ನೀರು ಸರಬರಾಜು ಮಾಡಲಾಗುವುದು. ಏಪ್ರಿಲ್ ಬಳಿಕ ಸಮಸ್ಯೆ ಎದುರಾಗಬಹುದು ಎನ್ನುತ್ತಾರೆ ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಹುಲ್ ಕಾಂಬ್ಳೆ.

ಅಗತ್ಯ ಕ್ರಮಕ್ಕೆ ಸೂಚನೆ
‘ಜೇವರ್ಗಿ: ಚಿಗರಳ್ಳಿ ಯಾಳವಾರ ಲಕಣಾಪುರ ಕೆಲ್ಲೂರ ಹಾಗೂ ಮಂದೇವಾಲ ತಾಂಡಾ ನೀರಿನ ಸಮಸ್ಯೆ ಎದುರಿಸುವ ಸಾಧ್ಯತೆಗಳಿವೆ. ‘ಬೇಸಿಗೆಯ ಆರಂಭದಲ್ಲಿ ನೀರಿನ ಕೊರತೆ ಕಂಡುಬಂದರೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಮಲ್ಲಣ್ಣ ಯಲಗೋಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಐದು ದಿನಕ್ಕೊಮ್ಮೆ ನೀರು ಸರಬರಾಜು
ಆಳಂದ: ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಕಟ ಹೆಚ್ಚಾಗುತ್ತಿದ್ದು ಪಟ್ಟಣದಲ್ಲಿ ಐದು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ. ಸರಸಂಬಾ ಸಕ್ಕರಗಾ ಝಳಕಿ (ಕೆ) ಹಾಗೂ ಮದಗುಣಕಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಮೂಲ ಬತ್ತಿದ್ದು ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಯಿಂದ ಕುಡಿಯುವ ನೀರು ಖರೀದಿಸಿ ಗ್ರಾಮಸ್ಥರಿಗೆ ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ.

ಒಂದು ವಾರಕ್ಕೆ ಆಗುವಷ್ಟು ನೀರು ಸಂಗ್ರಹ ‌

ಅಫಜಲಪುರ: ಭೀಮಾ ತೀರದ ಸುಮಾರು 50 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನ– ಜಾನುವಾರು ಪರದಾಡುವಂತಾಗಿದೆ.  ‘ಹಲವು ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆದರೂ ನೀರು ಬರುತ್ತಿಲ್ಲ. ಕೆಲವು ಕಡೆ ನೀರು ಬಂದರು ಕೆಲವು ದಿನಗಳಲ್ಲಿ ಸ್ಥಗಿತವಾಗುತ್ತಿವೆ’ ಎಂದು ಆರ್‌ಡಿಡಬ್ಲ್ಯುಎಸ್‌ ಉಪ ವಿಭಾಗದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಾಬುರ ಜ್ಯೋತಿರ್ ತಿಳಿಸಿದರು. ಭೀಮಾ ನದಿಯ ಜಾಕ್‌ವೆಲ್‌ನಲ್ಲಿ ಒಂದು ವಾರಕ್ಕೆ ಆಗುವಷ್ಟು ನೀರಿನ ಸಂಗ್ರಹವಿದೆ. ಹೀಗಾಗಿ ಪಟ್ಟಣಕ್ಕೆ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ. ಭೀಮ ಬ್ಯಾರೇಜಿನಿಂದ ನೀರು ಬಿಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಕುಡಿಯುವ ನೀರಿಗಾಗಿ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪುರಸಭೆಯ ಮುಖ್ಯ ಅಧಿಕಾರಿ ವಿಜಯ ಮಹಾಂತೇಶ್ ಹೂಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.