ಚಿಂಚೋಳಿ(ಕಲಬುರಗಿ ಜಿಲ್ಲೆ): ಇಲ್ಲಿನ ಚಂದಾಪುರದ ತಾಲ್ಲೂಕು ಆಸ್ಪತ್ರೆಯ ಹಿಂದುಗಡೆ ಇರುವ ಆಕ್ಸಿಜನ್ ಘಟಕದಲ್ಲಿ ಭಾನುವಾರ ಸ್ಫೋಟ ಸಂಭವಿಸಿದೆ.
ಸ್ಫೋಟದಿಂದ ಭಾರಿ ಸದ್ದು ಬಂದಿದ್ದು, ಆಮ್ಲಜನಕದ ವಾಸನೆ ಆಸ್ಪತ್ರೆ ಮತ್ತು ಸುತ್ತಲಿನ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಹಬ್ಬಿದೆ. ಇದರಿಂದ ಭೀತಿಗೊಳಗಾದ ಸಿಬ್ಬಂದಿ ಹಾಗೂ ರೋಗಿಗಳು ಆಸ್ಪತ್ರೆ ಖಾಲಿ ಮಾಡಿ ಆವರಣದಲ್ಲಿ ಕುಳಿತಿದ್ದಾರೆ.
ವೈದ್ಯರು ಮತ್ತು ಸಿಬ್ಬಂದಿ ವಸತಿ ಗೃಹಗಳನ್ನು ಖಾಲಿ ಮಾಡಿದ್ದಾರೆ. ಆಕ್ಸಿಜನ್ ಘಟಕದಲ್ಲಿ ನಿರಂತರ ಸೋರಿಕೆ ಆಗುತ್ತಿದೆ. ಸಮೀಪ ಹೋಗಲು ಯಾರನ್ನು ಬಿಡುತ್ತಿಲ್ಲ. ಅಗ್ನಿ ಶಾಮಕ ದಳದ ಅಧಿಕಾರಿ ಹಸನ್ ನೇತೃತ್ವದಲ್ಲಿ ಸೋರಿಕೆ ತಡೆಯುವ ಪ್ರಯತ್ನ ಮುಂದುವರಿದಿದೆ.
ಆಸ್ಪತ್ರೆ ಸಿಎಂಒ ಡಾ. ಸಂತೋಷ ಪಾಟೀಲ, ಡಾ. ಜಾಕೀರ್ ಅನ್ಸಾರಿ ಹಾಗೂ ಸಿಬ್ಬಂದಿ ಮತ್ತು ರೋಗಿಗಳು ಆಸ್ಪತ್ರೆಯ ಹೊರಗಡೆ ನಿಂತಿದ್ದರು.
ಸಬ್ ಇನ್ಸ್ಪೆಕ್ಟರ್ ಹಣಮಂತ ಭಂಕಲಗಿ ಸ್ಥಳಕ್ಕೆ ಧಾವಿಸಿದ್ದು ಸುತ್ತಲಿನ ಬಡಾವಣೆ ಜನರಿಗೂ ಜಾಗೃತಿ ವಹಿಸಲು ಸೂಚಿಸಿದ್ದಾರೆ.
ಆಸ್ಪತ್ರೆಯ ವಿದ್ಯುತ್ ಪೂರೈಕೆ, ಜನರೇಟರ್ ಎಲ್ಲವೂ ಬಂದ್ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಎರಡು ಆಮ್ಲಜನಕ ಘಟಕಗಳಿದ್ದು ಒಂದರಲ್ಲಿ ಸೋರಿಕೆ ಹಾಗೂ ಭಾರಿ ಸದ್ದು ಕೇಳಿ ಬಂದ ಕಾರಣ ಸ್ಥಳೀಯರು ಭಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.