ADVERTISEMENT

ಕಾಳಗಿ | ಸಾಲಬಾಧೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 15:43 IST
Last Updated 11 ಜನವರಿ 2024, 15:43 IST
ಹೈದರ ಪಟೇಲ್
ಹೈದರ ಪಟೇಲ್   

ಕಾಳಗಿ: ಸಾಲಬಾಧೆ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳ ಸ್ಥಿತಿಯಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ತಾಲ್ಲೂಕಿನ ಕೋಡ್ಲಿ ಕ್ರಾಸ್‌ದಲ್ಲಿ ಜರುಗಿದೆ.

ರುಮ್ಮನಗೂಡ ಗ್ರಾಮದ ಹೈದರ ಪಟೇಲ್ ಲಾಡಲೆ ಪಟೇಲ್(68) ಪತ್ತೆಪಾಡ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡವರು. ಒಬ್ಬ ಪುತ್ರ ಹಾಗೂ ಪುತ್ರಿ ಇದ್ದು, ಇಬ್ಬರೂ ಮಾನಸಿಕ ಅಸ್ವಸ್ಥರಾಗಿದ್ದಾರೆ. ಮಳೆ ಕೊರತೆಯಿಂದ 8 ಎಕರೆ ಜಮೀನಲ್ಲಿ ಸಾಲ ಮಾಡಿ ಬಿತ್ತನೆಗೈದಿದ್ದ ಬೆಳೆ ನಷ್ಟವಾಯಿತು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಿಂಚೋಳಿ ಶಾಖೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೋಡ್ಲಿಯಲ್ಲಿ ಅಂದಾಜು ₹ 2 ಲಕ್ಷ ಸಾಲ ಇದೆ. ಜತೆಗೆ ಖಾಸಗಿ ವ್ಯಕ್ತಿಗಳ ಬಳಿಯೂ ಸಾಲ ಇದೆ. ಅದನ್ನು ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬಸ್ಥರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ರಟಕಲ್ ಪಿಎಸ್ಐ ಪುಷ್ಪ ಬಿ.ಎಚ್. ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.