ಕಲಬುರಗಿ: ‘ರೈತ ಹಾಗೂ ಸೈನಿಕ ದೇಶದ ಬೆನ್ನೆಲುಬು’ ಎಂದು ಕೃಷಿ ಸಾಧಕಿ ಕವಿತಾ ಮಿಶ್ರಾ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಸೋಮವಾರ ಆಯೋಜಿಸಿದ್ದ ‘ತಿಂಗಳ ಅತಿಥಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಕೃಷಿ ಕಾಯಕ ಮಾಡುವ ರೈತ ಇಲ್ಲದಿದ್ದರೆ ಜನ ಉಪವಾಸದಿಂದ ಮಲಗಬೇಕಾಗುತ್ತದೆ. ಕೋವಿಡ್ನಿಂದ ಇಡೀ ದೇಶ ತಲ್ಲಣಗೊಂಡಿದ್ದ ಸಂದರ್ಭದಲ್ಲಿ ಅನ್ನ ಕೊಟ್ಟು ಜನರನ್ನು ಬದುಕಿಸಿದ್ದು ರೈತ ಎಂಬುದನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದರು.
ರೈತರ ಸಮಸ್ಯೆ ಮತ್ತು ಸವಾಲುಗಳ ಕುರಿತು ಚಿಂತನ–ಮಂಥನ ನಡೆಸಲು ಕಸಾಪ ಕೃಷಿ ಸಮ್ಮೇಳನ ಆಯೋಜಿಸಲು ನಿರ್ಧರಿಸಿರುವ ಕಾರ್ಯ ಶ್ಲಾಘನೀಯ ಎಂದರು.
ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ದೇಶಕ್ಕೆ ಅನ್ನದಾತನಾಗಿರುವ ರೈತ ನಮಗೆಲ್ಲರಿಗೂ ನಿಜವಾದ ದೇವರು. ಆದರೆ ಅವರು ಇಂದು ಸಂಕಷ್ಟದಲ್ಲಿದ್ದಾರೆ. ಈ ಕುರಿತು ಚರ್ಚಿಸಲು ಕೃಷಿ ಸಮ್ಮೇಳನ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.
ಕಸಾಪ ಜಿಲ್ಲಾ ಸಮಿತಿ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ಶಿಲ್ಪಾ ಜೋಶಿ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ವಿಶ್ವನಾಥ ಸುಲೇಪೇಟ, ಪ್ರಭವ ಪಟ್ಟಣಕರ್, ರೇವಣಸಿದ್ದಪ್ಪ ಜೀವಣಗಿ, ಗುರುಬಸಪ್ಪ ಸಜ್ಜನಶೆಟ್ಟಿ, ಶ್ರೀಕಾಂತ ಪಾಟೀಲ ದಿಕ್ಸಂಗಿ, ಬಿ.ಎಂ.ಪಾಟೀಲ ಕಲ್ಲೂರ, ನಾಗನಾಥ ಯಳಸಂಗಿ, ಸಂತೋಷ ಕುಡಳ್ಳಿ, ಬಸವಂತರಾಯ ಕೋಳಕೂರ ಹಾಗೂ ಶಿವಶರಣ ಹಡಪದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.