ಜೇವರ್ಗಿ: ಪ್ರಸಕ್ತ ವರ್ಷದಲ್ಲಿ ಬರಗಾಲ ಆವರಿಸಿದ್ದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕೊಡಲೇ ರೈತರ ನೆರವಿಗೆ ಧಾವಿಸಬೇಕು. ಬೆಳೆಗಳಿಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲಪ್ಪ ಬಂಕಲಗಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರ ಸಭೆಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹5 ಸಾವಿರ ಕೋಟಿ ಬಜೆಟ್ನಲ್ಲಿ ಶೇ 5ರಷ್ಟು ಅನುದಾನ ಒದಗಿಸಬೇಕು. ನೀರಾವರಿಗಾಗಿ ರೈತರ ಪಂಪ್ ಸೆಟ್ಗಳಿಗೆ 10 ತಾಸು ವಿದ್ಯುತ್ ನೀಡಬೇಕು. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ರಾಜ್ಯ ಸರ್ಕಾರ ಬಚಾವತ್ ಆಯೋಗದ ತೀರ್ಪಿನಂತೆ ನಮ್ಮ ಪಾಲಿನ ನೀರು 15 ಟಿಎಂಸಿ ಮೀಸಲಿಟ್ಟು, 5 ಟಿಎಂಸಿ ನೀರನ್ನು ಭೀಮಾನದಿಗೆ ಹರಿಸಬೇಕು. ಗ್ರಾಮೀಣ ಭಾಗದ ಸೇವೆಗಳಾದ ಆಹಾರ ಪಡಿತರ ಚೀಟಿ, ಆಧಾರ ನೋಂದಣಿ, ಜನನ ಹಾಗೂ ಮರಣ ಪ್ರಮಾಣ ಪತ್ರ ಸೇರಿದಂತೆ ಗ್ರಾ.ಪಂನಲ್ಲಿ ಬಾಪೂಜಿ ಸೇವಾ ಕೇಂದ್ರಗಳಿಗೆ ಸರ್ಕಾರಿ ಲಾಗಿನ್ ನೀಡಿ, ಸೇವೆಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಕಾರರು ಪಟ್ಟಣದ ರಿಲಯನ್ಸ್ ಪಂಪ್ನಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ಮುಖಾಂತರ ಪ್ರತಿಭಟನೆ ನಡೆಸಿ, ಎರಡು ಗಂಟೆಗಳವರೆಗೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಸ್ಪಂದಿಸದ ಪ್ರತಿಭಟನಾಕಾರರು, ಕೂಡಲೇ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹಟಹಿಡಿದರು. ನಂತರ ಸ್ಥಳಕ್ಕೆ ಧಾವಿಸಿದ ಕೆಕೆಆರ್ಡಿಬಿ ಅಧ್ಯಕ್ಷ ಶಾಸಕ ಡಾ.ಅಜಯಸಿಂಗ್ ಅವರು, ಪ್ರತಿಭಟನಕಾರರ ಮನವೊಲಿಸುವಲ್ಲಿ ಯಶ್ವಸಿಯಾದರು. ಬಳಿಕ ತಹಶೀಲ್ದಾರ್ಗೆ ಮನವಿ ಸಲ್ಲಿಸಿ, ಪ್ರತಿಭಟನೆ ಹಿಂಪಡೆಯಲಾಯಿತು.
ಕರವೇ ನಿಂಗರಾಜ ಬಣಮಗಿ, ಶಾಂತಗೌಡ ಹುಲ್ಲೂರ, ಸುರೇಖಾ ಪಾಟೀಲ, ಅಮೃತಗೌಡ ಪಾಟೀಲ, ಸುರೇಶ ಸಾಗರ, ಮಲ್ಲಿಕಾರ್ಜುನ ಬಿರಾದಾರ, ವಿಶ್ವಾನಾಥ ನಾಟಿಕಾರ, ಬಸವರಾಜ ನಾಯ್ಕೋಡಿ, ರಮೇಶ ಉಪಾಸಿ, ರೇವಣಸಿದ್ದ ಗಡೇದ, ಕಲ್ಲಪ್ಪ ಪೂಜಾರಿ, ಮಹಾಂತಗೌಡ ಪಾಟೀಲ, ಭೀಮು ಸುಣಗಾರ, ಶ್ರವಣಕುಮಾರ ಶಹಾಬಾದ, ಅನಿಲ ಬಣಮಗಿ, ಸೋಹಿಲ್ ಟೆಕ್ಕಿ, ಖಾಸೀಂ, ಅನಿಲ ಹಜೇರಿ ಸೇರಿದಂತೆ ಪದಾಧಿಕಾರಿಗಳು, ರೈತರು, ಮಹಿಳೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.